ADVERTISEMENT

ಕಲಬುರಗಿ | ಜೂಜಾಟ: ದಿವ್ಯಾ ಹಾಗರಗಿ ಸೇರಿ ಏಳು ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2025, 18:26 IST
Last Updated 23 ಅಕ್ಟೋಬರ್ 2025, 18:26 IST
   

ಕಲಬುರಗಿ: ನಗರದ ಹಳೇ ಜೇವರ್ಗಿ ರಸ್ತೆಯಲ್ಲಿರುವ‌ ಸಾಮಾಜಿಕ ಕಾರ್ಯಕರ್ತೆ ಹಾಗೂ ಪಿಎಸ್ಐ ಹಗರಣ‌ ಪ್ರಕರಣದ ಆರೋಪಿ ದಿವ್ಯಾ ಹಾಗರಗಿ ಮನೆ ಮೇಲೆ‌ ಕಲಬುರಗಿ ಸಿಸಿಬಿ ಅಧಿಕಾರಿಗಳು ಬುಧವಾರ ದಾಳಿ‌ ನಡೆಸಿದ್ದಾರೆ.

‘ಮನೆಯಲ್ಲಿ ಗುಂಪುಕಟ್ಟಿಕೊಂಡು ಇಸ್ಪೀಟ್ ಜೂಜಾಟ ನಡೆಸುತ್ತಿದ್ದ ವೇಳೆ ದಾಳಿ ನಡೆಸಿ, ಏಳು ಮಂದಿಯನ್ನು ಬಂಧಿಸಲಾಗಿದೆ. ಜೂಜಾಟದಲ್ಲಿ ಪಣಕ್ಕೆ ಇಟ್ಟಿದ್ದ ₹12,500 ಸೇರಿದಂತೆ ಒಟ್ಟು ₹42,500 ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ದಿವ್ಯಾ ಹಾಗರಗಿ, ಸರ್ಕಾರಿ ನೌಕರ ರಾಜು‌ ಲೆಂಗಟಿ, ಶಿವಶರಣಪ್ಪ‌ ಮಶಾಳ, ರವೀಂದ್ರ ಮಾನಕರ, ಭಗವಾನ ಜಾಕೋರಿ, ಮಲ್ಲಿನಾಥ ಮಂಗಲಗಿ ಹಾಗೂ ಸಂಗಮೇಶ ನಾಗನಹಳ್ಳಿ ವಿರುದ್ಧ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ADVERTISEMENT

ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ದಿವ್ಯಾ ಹಾಗರಗಿ, ‘ವಾರದ ಹಿಂದೆ ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಹೇಳಿಕೆ ನೀಡಿದ್ದೆ. ಅದಕ್ಕೆ ಪ್ರತೀಕಾರವಾಗಿ ನನ್ನ ಮರ್ಯಾದೆ ಕಳೆಯಲು ಅವರೇ ದಾಳಿ ಮಾಡಿಸಿದ್ದಾರೆ. ಫೈನಾನ್ಸ್‌ ಆರಂಭಿಸುವ ಕುರಿತು ನಿರ್ಧಾರ ಕೈಗೊಳ್ಳಲು ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಾವೆಲ್ಲ ಸೇರಿದ್ದೆವು. ಚಹ ಕುಡಿಯುತ್ತಿದ್ದಾಗ ದಾಳಿ ನಡೆಸಲಾಗಿದೆ. ವಾಸ್ತುಗೆ ಸಂಬಂಧಿಸಿದಂತೆ ಮನೆಯಲ್ಲಿಟ್ಟಿದ್ದ ಇಸ್ಪೀಟ್‌ ಕಾರ್ಡ್‌ ಹಾಗೂ ₹42 ಸಾವಿರ ವಶಕ್ಕೆ ಪಡೆದಿದ್ದಾರೆ. ಏಳು ಮಂದಿಯ ಬಳಿ ₹40 ಸಾವಿರ ಹಣ ಇರುವುದಿಲ್ಲವೇ’ ಎಂದು ಪ್ರಶ್ನಿಸಿದರು.

ಕಾನೂನು ಕ್ರಮಕ್ಕೆ ಆಗ್ರಹ

ಕಲಬುರಗಿ: ನಗರದ ಸರ್ದಾರ್‌ ಪಟೇಲ್‌ ವೃತ್ತದಲ್ಲಿ ಸಾರ್ವಜನಿಕ ಸ್ಥಳದಲ್ಲಿ ‘ಐ ಲವ್‌ ಆರ್‌ಎಸ್‌ಎಸ್‌’ ಅಭಿಯಾನಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ನಡೆಸಿದ್ದ ‘ಐ ಲವ್‌ ಸಂವಿಧಾನ’ ಪೋಸ್ಟರ್‌ ಅಭಿಯಾನಕ್ಕೆ ಅನುಮತಿ ಪಡೆಯದೇ ಪೋಸ್ಟರ್‌ ಅಂಟಿಸಿ ನಗರದ ಸೌಂದರ್ಯವನ್ನು ಹಾಳು ಮಾಡಲಾಗಿದೆ ಎಂದು ಆರೋಪಿಸಿ ಶಿವಸೇನಾ ಪಕ್ಷದ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಮಹಾನಗರ ಪಾಲಿಕೆ ಆಯುಕ್ತರಿಗೆ ದೂರು ನೀಡಿದ್ದಾರೆ.

ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷ ರೇಣುಕಾ ಸಿಂಗೆ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.