ADVERTISEMENT

ಪಿಎಸ್ಐ ನೇಮಕಾತಿ ಪರೀಕ್ಷೆಯ ಹಗರಣ: ತನಿಖೆ ಚುರುಕುಗೊಳಿಸಿದ ಸಿಐಡಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 9:40 IST
Last Updated 18 ಏಪ್ರಿಲ್ 2022, 9:40 IST
ಕಲಬುರಗಿಯ ಜ್ಞಾನಜ್ಯೋತಿ ಶಾಲೆಯಲ್ಲಿ ನಡೆದ ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧಿತರಾದ ಪರೀಕ್ಷಾ ಕೇಂದ್ರದ ಮೂವರು ಮೇಲ್ವಿಚಾರಕಿಯರನ್ನು ಸಿಐಡಿ ಪೊಲೀಸರು ಸೋಮವಾರ ಸ್ಥಳಕ್ಕೆ ಕರೆತಂದು ತಪಾಸಣೆ ಮಾಡಿದರು
ಕಲಬುರಗಿಯ ಜ್ಞಾನಜ್ಯೋತಿ ಶಾಲೆಯಲ್ಲಿ ನಡೆದ ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧಿತರಾದ ಪರೀಕ್ಷಾ ಕೇಂದ್ರದ ಮೂವರು ಮೇಲ್ವಿಚಾರಕಿಯರನ್ನು ಸಿಐಡಿ ಪೊಲೀಸರು ಸೋಮವಾರ ಸ್ಥಳಕ್ಕೆ ಕರೆತಂದು ತಪಾಸಣೆ ಮಾಡಿದರು   

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದ, ಇಲ್ಲಿನ ಜ್ಞಾನಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆ ಮೇಲೆ ಸೋಮವಾರ ಮತ್ತೆ ದಾಳಿ ಮಾಡಿದ ಸಿಐಡಿ ಅಧಿಕಾರಿಗಳು ತೀವ್ರ ಪರಿಶೀಲನೆ ನಡೆಸಿದರು.

ಅಕ್ರಮದಲ್ಲಿ ಪಾಲ್ಗೊಂಡ ಆರೋಪದಡಿ ಬಂಧಿತರಾದ ಮೂವರು ಅಭ್ಯರ್ಥಿಗಳು ಹಾಗೂ ಮೂವರು ಪರೀಕ್ಷೆ ಮೇಲ್ವಿಚಾರಕಿಯರನ್ನು ಸ್ಥಳಕ್ಕೆ ಕರೆತಂದ ಅಧಿಕಾರಿಗಳು, ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಿಕೊಂಡರು.

ಸಿಐಡಿ ಎಸ್‌ಪಿ ರಾಘವೇಂದ್ರ ಹೆಗಡೆ, ಡಿವೈಎಸ್‌ಪಿಗಳಾದ ಶಂಕರಗೌಡ ಪಾಟೀಲ, ಪ್ರಕಾಶ ರಾಠೋಡ ನೇತೃತ್ವದ ತಂಡವು ತನಿಖೆಯನ್ನು ಚುರುಕುಗೊಳಿಸಿದೆ.

ADVERTISEMENT

ಮೂವರೂ ಆರೋಪಿಗಳಲ್ಲಿ ಇಬ್ಬರು ಶಾಲೆಯ ಎರಡನೇ ಮಹಡಿಯ ಕೇಂದ್ರದಲ್ಲಿ ಒಬ್ಬ ಕೆಳಮಹಡಿಯಲ್ಲಿ ಪರೀಕ್ಷೆ ಹಾಜರಾಗಿದ್ದ. ಈ ಮೂರು ಕೋಣೆಗಳು, ಶಾಲೆಯ ಮಾಲೀಕರಾದ ದಿವ್ಯಾ ಹಾಗರಗಿ ಅವರ ಕಚೇರಿ, ಮುಖ್ಯಶಿಕ್ಷಕರ ಕೋಣೆಯನ್ನೂ ಅಧಿಕಾರಿಗಳು ತಡಕಾಡಿದರು.

ಸಿಸಿಟಿವಿ ಕ್ಯಾಮೆರಾಗಳ ಕೆಲವು ದಾಖಲೆಗಳು, ಉಪಕರಣಗಳನ್ನು ವಶಕ್ಕೆ ತೆಗೆದುಕೊಂಡರು.

ರಾಜೇಶ ಬಂಧನ:ದಿವ್ಯಾ ಹಾಗರಗಿ ಮನೆ ಮೇಲೆ ಭಾನುವಾರ ದಾಳಿ ಮಾಡಿದ ಸಿಐಡಿ ಅಧಿಕಾರಿಗಳು, ದಿವ್ಯಾ ಅವರ ಪತಿ ರಾಜೇಶ್ ಅವರನ್ನು ತಡರಾತ್ರಿ ಬಂಧಿಸಿದ್ದಾರೆ. ಅವರ ವಾಹನವನ್ನೂ ಸೀಜ್ ಮಾಡಿದ್ದಾರೆ.

‘ರಾಜೇಶ್ ಅವರು ತನಿಖೆಗೆ ಸರಿಯಾಗಿ ಉತ್ತರ ನೀಡಲಿಲ್ಲ. ಮೇಲಾಗಿ, ಆರೋಪಿಯನ್ನು ತಮ್ಮ ಕಾರಿನಲ್ಲಿಯೇ ಬೇರೆ ಸ್ಥಳಕ್ಕೆ ಕಳುಹಿಸಿ ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದಾರೆ. ಈ ಆರೋಪದಡಿ ಅವರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಂದ ಮತ್ತಷ್ಟು ಉಪಯುಕ್ತ ಮಾಹಿತಿಗಳು ಸಿಕ್ಕಿವೆ. ಎಷ್ಟು ಜನ ಇದರಲ್ಲಿ ಭಾಗಿಯಾಗಿದ್ದಾರೋ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘545 ಪಿಎಸ್‌ಐ ನೇಮಕಾತಿಗೆ ಅಕ್ಟೋಬರ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದಿತ್ತು. ಜ್ಞಾನಜ್ಯೋತಿ ಶಾಲೆಯಲ್ಲಿ ತೆರೆದಿದ್ದ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಎಸಗಿದ ನಾಲ್ವರು ಅಭ್ಯರ್ಥಿಗಳು ಮತ್ತು ಮೂವರು ಪರೀಕ್ಷಾ ಮೇಲ್ವಿಚಾರಕಿಯರನ್ನು ಈಗಾಗಲೇ ಬಂಧಿಸಲಾಗಿದೆ. ರಾಜೇಶ್ ಬಂಧನದ ಮೂಲಕ ಬಂಧಿತರ ಸಂಖ್ಯೆ 8ಕ್ಕೆ ಏರಿದೆ.

ಅಭ್ಯರ್ಥಿಗಳಾದ ಕಲಬುರಗಿಯ ವೀರೇಶ ನಿಡಗುಂದ, ಅರುಣ ಪಾಟೀಲ, ರಾಯಚೂರಿನ ಕೆ.ಪ್ರವೀಣಕುಮಾರ, ಚೇತನ ನಂದಗಾಂವ, ಪರೀಕ್ಷಾ ಮೇಲ್ವಿಚಾರಣೆಗೆ ನಿಯೋಜನೆಗೊಂಡಿದ್ದ ಶಿಕ್ಷಕಿಯರಾದ ಸುಮಾ, ಸಿದ್ದಮ್ಮ ಹಾಗೂ ಸಾವಿತ್ರಿ ಅವರನ್ನು ಶನಿವಾರ ಬಂಧಿಸಲಾಗಿದ್ದು, ಇನ್ನೂ ಎರಡು ದಿನ ಸಿಐಡಿ ಪೊಲೀಸರ ವಶದಲ್ಲಿರುತ್ತಾರೆ.

ಪ್ರಕರಣ ಬೆಳಕಿಗೆ ಬಂದಾಗಿನಿಂದ ದಿವ್ಯಾ ಪತ್ತೆಯಾಗಿಲ್ಲ. ಮೇಲಾಗಿ, ಶಾಲೆಯ ಮುಖ್ಯ ಶಿಕ್ಷಕ, ಇತರ ಸಿಬ್ಬಂದಿಯೂ ತಲೆಮರೆಸಿಕೊಂಡಿದ್ದಾರೆ.

ಇನ್ನೂ ಕೆಲ ಅಭ್ಯರ್ಥಿಗಳು, ಮಧ್ಯವರ್ತಿಗಳು ಭಾಗಿಯಾಗಿರುವ ಬಗ್ಗೆ ಶಂಕೆ ಇದ್ದು, ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.