
ಕಾಳಗಿ: ತಾಲ್ಲೂಕಿನ ತೆಂಗಳಿ ಗ್ರಾಮದ ಇತಿಹಾಸ ಪ್ರಸಿದ್ಧ ಮಹಾದ್ವಾರ (ಅಗಸಿ) ಅನೇಕ ವರ್ಷಗಳಿಂದ ಅವನತಿಯ ದಾರಿ ಹಿಡಿದಿದೆ. ಕಲ್ಲುಗಳಿಂದ ಕಟ್ಟಿರುವ ಅದರ ದೊಡ್ಡದಾದ ಗೋಡೆ ದಿನೆದಿನೆ ಎಲ್ಲೆಂದರಲ್ಲಿ ಶಿಥಿಲಗೊಂಡು ಬೀಳುತ್ತಿದ್ದರೂ ರಕ್ಷಣೆಗೆ ಯಾರೂ ಮುಂದೆ ಬರುತ್ತಿಲ್ಲ’ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಿದ್ದಾರೆ.
ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಮಾನ್ಯಖೇಟದ ಪಕ್ಕದಲ್ಲಿದ್ದ ತೆಂಗಳಿ ಗ್ರಾಮವು ಒಂದು ಪ್ರಮುಖ ಕೇಂದ್ರವಾಗಿತ್ತು. ಅದು ಈಗ ಗ್ರಾಮ ಪಂಚಾಯಿತಿ ಕೇಂದ್ರಸ್ಥಾನವೂ ಹೌದು. ಇಲ್ಲಿರುವ ಅನೇಕ ಇತಿಹಾಸ ಹೊಂದಿರುವ ಸ್ಮಾರಕಗಳ, ದೇವಾಲಯಗಳ ಪೈಕಿ ಊರಿನ ಮಹಾದ್ವಾರ (ಅಗಸಿ)ಯೂ ಒಂದಾಗಿದೆ.
ಇದು, ದೊಡ್ಡ ಗೋಡೆಗಳನ್ನು ಹೊಂದಿ ಕೋಟೆಯಂತೆ ಕಂಡುಬರುವುದಾಗಿದೆ. ಹಿರಿಯರು ಹೇಳುವಂತೆ ‘ಈ ಗ್ರಾಮಕ್ಕೆ ಸುತ್ತಲೂ ದೊಡ್ಡ ಗೋಡೆ ಆವರಿಸಿ ಕೇವಲ ಒಂದೇ ಒಂದು ಮಹಾದ್ವಾರ (ಅಗಸಿ) ಇತ್ತು. ಈ ಮಾರ್ಗದಿಂದಲೇ ಎಲ್ಲರು ಊರೊಳಗೆ ಹೋಗಿಬರುತ್ತಿದ್ದರು. ಅದುವೇ ಈಗ ಅವನತಿಯ ಅಂಚಿನಲ್ಲಿದೆ’ ಎನ್ನುತ್ತಾರೆ.
ಈ ಅಗಸಿಗೆ ಕಟ್ಟಿಗೆಯ ದೊಡ್ಡ ಬಾಗಿಲು ತಟ್ಟೆಗಳು ಇದ್ದವು. ರಾತ್ರಿ ವೇಳೆ ಅವುಗಳನ್ನು ಮುಚ್ಚಿ ಊರಿನ ರಕ್ಷಣೆ ಮಾಡಲಾಗುತ್ತಿತ್ತು. ಆದರೆ ಈಗ ಅವು ಕಳಚಿ ಮಾಯವಾಗಿವೆ ಎನ್ನುತ್ತಾರೆ ಜನರು.
ಅಗಸಿಯ ಎಡ–ಬಲ ಭಾಗದಲ್ಲಿ ಗೋಡೆ ಉರುಳಿಬಿದ್ದು ಹಾಳಾಗಿದೆ. ಕೆಲವೊಂದಿಷ್ಟು ಜಾಗ ಅತಿಕ್ರಮಣವಾಗಿದೆ. ಗೋಡೆ ದಿನೆ ದಿನೆ ಶಿಥಿಲಗೊಂಡು ಗಿಡಗಂಟಿ ಬೆಳೆಯುತ್ತಿದೆ, ನೋಡುಗರಿಗೆ ಬೀಳುವ ಭಯ ಮೂಡಿಸುತ್ತಿದೆ. ಪಕ್ಕದಲ್ಲೇ ಗ್ರಾಮ ಪಂಚಾಯಿತಿ ಇದ್ದರೂ ನಿರ್ವಹಣೆ ಮರೀಚಿಕೆಯಾಗಿ, ಜನಪ್ರತಿನಿಧಿಗಳು ದೂರ ಉಳಿದಿದ್ದಾರೆ’ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ಥಳೀಯ ಅಂಡಗಿ ಪ್ರತಿಷ್ಠಾನವು ಮಹಾದ್ವಾರದ ದುರಸ್ತಿಗಾಗಿ ಸರ್ಕಾರಕ್ಕೆ ಈ ಹಿಂದೆ ಮನವಿ ಮಾಡಿದೆ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ತಾಂತ್ರಿಕವಾಗಿ ಪರಿಶೀಲಿಸಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದಿಂದ ₹ 16 ಲಕ್ಷ ವೆಚ್ಚದ ಕ್ರಿಯಾಯೋಜನೆ ರೂಪಿಸಿ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಿದ್ದಾರೆ. ಆದರೆ, ಜಿಲ್ಲಾ ಪಂಚಾಯಿತಿಯು ಈ ಕಾಮಗಾರಿಯನ್ನು ಕೆಕೆಆರ್ಡಿಬಿ ಯೋಜನೆಯಡಿ ಅಥವಾ ಇತರೆ ಯೋಜನೆಯಡಿಯಲ್ಲಿ ಕ್ರಮವಹಿಸುವಂತೆ ಪಂಚಾಯತ್ ರಾಜ್ ಎಂಜಿನಿಯರಿಂಗ್ಗೆ ತಿಳಿಸಿ ಕೈ ತೊಳೆದುಕೊಂಡಿದೆ. ಸರ್ಕಾರದ ಈ ನಡೆ ಜನರ ಅಸಮಾಧಾನಕ್ಕೆ ಎಡೆಮಾಡಿ ದುರಸ್ತಿ ಯಾವಾಗ? ಎಂಬ ಪ್ರಶ್ನೆ ಹುಟ್ಟು ಹಾಕಿದೆ.
ನೃಪತುಂಗ ರಾಜನ ಕಾಲದಲ್ಲಿ ಕಟ್ಟಿದ ತೆಂಗಳಿ ಕೋಟೆಯ ಹೆಬ್ಬಾಗಿಲು ಹಲವು ವರ್ಷಗಳಿಂದ ಅವನತಿ ಸ್ಥಿತಿಯಲ್ಲಿದೆ ಸರ್ಕಾರ ದುರಸ್ತಿಗೊಳಿಸಿ ಐತಿಹಾಸಿಕ ಪರಂಪರೆ ಉಳಿಸಬೇಕುಶಿವರಾಜ ಅಂಡಗಿ ಅಧ್ಯಕ್ಷ ಅಂಡಗಿ ಪ್ರತಿಷ್ಠಾನ ತೆಂಗಳಿ
ದಿನಕಳೆದಂತೆ ಅಗಸಿ ಗೋಡೆಯ ಕಲ್ಲುಗಳು ಕದಲುತ್ತಿವೆ ಮೇಲ್ಭಾಗ ಹಾಳುಬಿದ್ದು ಜೂಜುಕೋರರ ಅಡ್ಡೆಯಾಗಿದೆ. ಸಂಬಂಧಪಟ್ಟ ಇಲಾಖೆ ಗಮನಹರಿಸಿ ಜೀರ್ಣೋದ್ದಾರ ಮಾಡಬೇಕುಪ್ರಸಾದ ಹಳ್ಳಿ ಯುವ ಮುಖಂಡ ತೆಂಗಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.