ಅಫಜಲಪುರ (ಕಲಬುರಗಿ): ಪಿಎಸ್ಐ ಹಗರಣದಲ್ಲಿ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿರುವ ಆರ್.ಡಿ. ಪಾಟೀಲ ಪರ ಶುಕ್ರವಾರ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಪ್ರಚಾರ ಮಾಡಿದರು.‘ಪಾಟೀಲ ಗೆದ್ದರೆ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗುವರು’ ಎಂದು ಭರವಸೆ ನೀಡಿದರು.
ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ಆರ್.ಡಿ. ಪಾಟೀಲ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಮತ್ತು ಅಫಜಲಪುರ ಮತಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಪರ ಅಲೆ ಎದ್ದಿದೆ. ಹೀಗಾಗಿ ಆರ್.ಡಿ.ಪಾಟೀಲ್ ಅವರಿಗೆ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿದರೆ, ಸಮ್ಮಿಶ್ರ ಸರ್ಕಾರದಲ್ಲಿ ಸಚಿವರನ್ನಾಗಿ ಮಾಡುತ್ತೇವೆ’ ಎಂದರು.
‘ದೇಶದ ಪ್ರಧಾನಿಯಾಗಲು ಉತ್ತರ ಪ್ರದೇಶಕ್ಕೆ ಬರುತ್ತಾರೆ. ಆದರೆ, ನಾನು ಆರ್.ಡಿ. ಪಾಟೀಲ ಗೆಲುವಿಗೆ ಅಫಜಲಪುರಕ್ಕೆ ಬಂದಿದ್ದೇನೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ಈ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿ. ನಾನು ಯಾವತ್ತೂ ನಿಮ್ಮ ಪರವಾಗಿ ಇರುತ್ತೇನೆ’ ಎಂದರು.
ಅಭ್ಯರ್ಥಿ ಆರ್.ಡಿ. ಪಾಟೀಲ ಮಾತನಾಡಿ, ‘ನನ್ನ ಮೇಲೆ ರಾಜಕೀಯ ಕುತಂತ್ರದಿಂದ 13 ಪ್ರಕರಣಗಳು ದಾಖಲಾಗಿವೆ. ಇದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ನಾನು ಕಾನೂನನ್ನು ಗೌರವಿಸುತ್ತೇನೆ. ಚುನಾವಣೆಯಲ್ಲಿ ಸೋತರೂ ಅಥವಾ ಗೆದ್ದರೂ ನಾನು ನಿರಂತರವಾಗಿ ಕ್ಷೇತ್ರದ ಜನರ ಜತೆ ಇರುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.