ADVERTISEMENT

ನಾನು ಯಡಿಯೂರಪ್ಪ ಭೇಟಿ ಮಾಡಿದ್ದು ಸಾಬೀತು ಮಾಡಿದರೆ ರಾಜಕೀಯ ಸನ್ಯಾಸ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 6:18 IST
Last Updated 13 ಅಕ್ಟೋಬರ್ 2021, 6:18 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಕಲಬುರಗಿ: ಮಾಜಿ‌ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ನಾನು ಭೇಟಿಯಾಗಿದ್ದನ್ನು ಎಚ್.ಡಿ.ಕುಮಾರಸ್ವಾಮಿ ಸಾಬೀತು ಮಾಡಿದರೆ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು‌.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಯಡಿಯೂರಪ್ಪ ಅವರ 76ನೇ ಜನ್ಮದಿನದಂದು ಮಾತ್ರ ನಾನು ಖುದ್ದಾಗಿ ಭೇಟಿ ಮಾಡಿದ್ದೇನೆ. ನಂತರ ಸದನದಲ್ಲಿ ಮುಖಾಮುಖಿಯಾಗಿದ್ದೇವೆ. ಇದನ್ನು ಹೊರತು ಪಡಿಸಿ ವೈಯಕ್ತಿಕವಾಗಿ ನಾನು ಯಡಿಯೂರಪ್ಪನವರನ್ನು ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಯಡಿಯೂರಪ್ಪ ಆಪ್ತರ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿಗೆ ನನ್ನ ಭೇಟಿ ಕಾರಣ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಸರ್ಕಾರ ನಡೆಸುವವರು ಯಾರು? ಮೋದಿ, ಯಡಿಯೂರಪ್ಪ ಮತ್ತು ಐಟಿ ದಾಳಿಗೊಳಗಾದ ಆಪ್ತರು ನಮ್ಮ ಪಕ್ಷದವರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ADVERTISEMENT

ನಾನು ವಿರೋಧ ಪಕ್ಷದಲ್ಲಿ ಇದ್ದಾಗ ಆಡಳಿತ ಪಕ್ಷದವರ ಮನೆ, ಕಚೇರಿಗೆ ಹೋಗಿಲ್ಲ. ಇಷ್ಟು ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಯಾರ ಮನೆಗೂ ಹೋಗಿಲ್ಲ. ಕುಮಾರಸ್ವಾಮಿ ಹಾಗೆ ಭೇಟಿ ‌ಮಾಡುವ ಗಿರಾಕಿ ಎಂದು ವ್ಯಂಗ್ಯವಾಡಿದರು.

ವಿರೋಧ ಪಕ್ಷದ ನಾಯಕನಾಗಲು ಸರ್ಕಾರ ಕೆಡವಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಹಾಗಿದ್ದರೆ ಜೆಡಿಎಸ್ ನ ಮೂವರೂ ಶಾಸಕರೂ ಬಿಜೆಪಿಗೆ ಹೋದರಲ್ಲ. ಅದರ ಬಗ್ಗೆ ಏನು ಹೇಳುತ್ತಾರೆ? ಅವರನ್ನೂ ನಾನೇ ಬಿಜೆಪಿಗೆ ಕಳಿಸಿದೆನಾ? ಎಂದು ಪ್ರಶ್ನಿಸಿದರು.

ಪುಟಗೋಸಿ ವಿರೋಧ ‌ಪಕ್ಷದ ನಾಯಕನಾಗಲು ಸರ್ಕಾರ ಕೆಡವಿದೆ ಎಂದು ಆರೋಪಿಸಿದ್ದಾರೆ. ಒಂದು ‌ಸಂವಿಧಾನಾತ್ಮಕ ಹುದ್ದೆಯನ್ನು ಮುಖ್ಯಮಂತ್ರಿ ಆಗಿದ್ದವರು ಇಷ್ಟೊಂದು ‌ಕೀಳಾಗಿ ನೋಡಿದರೆ ಹೇಗೆ? ಅವರ ತಂದೆ ಎಚ್.ಡಿ. ದೇವೇಗೌಡ ಅವರು ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ವಿರೋಧ ಪಕ್ಷದ ‌ನಾಯಕರಾಗಿದ್ದರು. ಹಾಗಿದ್ದರೆ ಅವರೂ ಪುಟಗೋಸಿನಾ ಎಂದು ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.