
ಮಲ್ಲಿಕಾರ್ಜುನ ಮುತ್ಯಾ ಬೆಂಬಲಿಸಿ ಬೀದಿಗಿಳಿದ ಕೋಲಿ ಕಬ್ಬಲಿಗ ಸಮುದಾಯದ ಜನ
ಕಲಬುರಗಿ: ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಂಬ ಆರೋಪದ ಹಿನ್ನೆಲೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಿಸಿರುವ 'ಸುಳ್ಳು' ಪ್ರಕರಣ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ನಗರದಲ್ಲಿ ಸೋಮವಾರ ಕೋಲಿ ಸಮುದಾಯದ ನೂರಾರು ಮಂದಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಕೋಲಿ, ಕಬ್ಬಲಿಗ ಎಸ್.ಟಿ ಹೋರಾಟ ಸಮಿತಿ ಹಾಗೂ ಮಲ್ಲಿಕಾರ್ಜುನ ಮುತ್ಯಾ ಅವರ ಅಭಿಮಾನಿಗಳ ಬಳಗದ ವತಿಯಿಂದ ನಗರದ ಜಗತ್ ವೃತ್ತದಲ್ಲಿ ಜಮಾಯಿಸಿದ ನೂರಾರು ಜನರು, ಮಲ್ಲಿಕಾರ್ಜುನ ಮುತ್ಯಾ ಪರವಾಗಿ ಘೋಷಣೆ ಮೊಳಗಿಸಿದರು.
ಬಿರು ಬಿಸಿಲಿನಲ್ಲೇ ಅಂಬಿಗರ ಚೌಡಯ್ಯ ಧ್ವಜಗಳು ಹಿಡಿದು, ಶಾಲಗಳು ಹಾಕಿಕೊಂಡು 'ಮಲ್ಲಿಕಾರ್ಜುನ ಮುತ್ಯಾ ಅವರೊಂದಿಗೆ ನಾವು ನಿಲ್ಲುತ್ತೇವೆ' ಭಿತ್ತಿ ಫಲಕ ಪ್ರದರ್ಶಿಸಿದರು.
ಜಗತ್ವೃತ್ತದಲ್ಲಿ ವಾಹನಗಳ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು.
'ಮಲ್ಲಿಕಾರ್ಜುನ ಮುತ್ಯಾ ಕಲ್ಯಾಣ ಕರ್ನಾಟಕ ಮಾತ್ರವಲ್ಲದೇ ಆಂಧ್ರ, ತಮಿಳುನಾಡಿನಲ್ಲೂ ಹೆಸರುವಾಸಿ ಆಗಿದ್ದಾರೆ. ವಿಡಿಯೊದಲ್ಲಿ ಮುತ್ಯಾರು ತಂದೆ ಹಾಗೂ ಮಗಳ ಸಂಬಂದಂತೆ ನಡೆದುಕೊಂಡಿದ್ದಾರೆ. ಆದರೆ, ಇದನ್ನು ತಿರುಚಿ ಜಿಲ್ಲಾಧಿಕಾರಿ, ಮಹಿಳಾ ಆಯೋಗ ಸೇರಿದಂತೆ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಇದನ್ನು ಕೂಡಲೇ ಹಿಂಡೆಯಬೇಕು' ಎಂದು ಮುಖಂಡರು ಆಗ್ರಹಿಸಿದರು.
ವಿವಿಧ ಸ್ವಾಮೀಜಿಗಳು, ರಾಜಕೀಯ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.