
ಕಾಳಗಿ: ಪ್ರತಿವರ್ಷ ಮಹಾಶಿವರಾತ್ರಿ ಸಂದರ್ಭದಲ್ಲಿ ರಾತ್ರಿ ವೇಳೆ ಜರುಗುವ ಕಲ್ಯಾಣ ಕರ್ನಾಟಕದ ಹೆಸರಾಂತ ಜಾತ್ರೆಯಾಗಿರುವ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ತಾಲ್ಲೂಕಿನ ಕೋರವಾರ ಹೊರವಲಯದ ಅಣಿವೀರಭದ್ರೇಶ್ವರ ಜಾತ್ರಾ ಮಹೋತ್ಸವ ಇಂದಿನಿಂದ (ಫೆ.17) ಮೂರುದಿನ ಅದ್ದೂರಿಯಾಗಿ ನೆರವೇರಲಿದೆ.
ಈ ನಿಮಿತ್ತ ವಿವಿಧೆಡೆಯಿಂದ ಹರಿದುಬರುವ ಸಹಸ್ರಾರು ಭಕ್ತರ ಶ್ರದ್ಧಾಭಕ್ತಿಯ ಸಡಗರ ಸಂಭ್ರಮಕ್ಕೆ ದೇವಸ್ಥಾನದ ಇಡೀ ಪರಿಸರ ಸಜ್ಜುಗೊಂಡಿದೆ. ಜಾತ್ರೆಯ ಅಂಗವಾಗಿ ಸೋಮವಾರ ದೇವಸ್ಥಾನದಲ್ಲಿ ಗರ್ಭಗುಡಿಯೊಳಗಿನ ಅಣಿವೀರಭದ್ರೇಶ್ವರ ದೇವರ ಮೂರ್ತಿಗೆ ವಿಶೇಷ ಪೂಜೆ, ನಂತರದಲ್ಲಿ ಶಿವಭಜನೆ ಕಾರ್ಯಕ್ರಮ ಶ್ರದ್ಧೆಯಿಂದ ಜರುಗಿತು.
ಮಂಗಳವಾರ ಬೆಳಿಗ್ಗೆ ದೇವರ ಮೂರ್ತಿಗೆ ರುದ್ರಾಭಿಷೇಕ, ವಿಶೇಷ ಪೂಜೆ ನಡೆಯಲಿದೆ. ಸಂಜೆ 6ಗಂಟೆಗೆ ಅಗ್ನಿಕುಂಡದಲ್ಲಿ ಹೋಮ, ವಿಶೇಷ ಪೂಜೆ ಮತ್ತು ಅಗ್ನಿಸ್ಪರ್ಶ ನೆರವೇರಲಿದೆ. ರಾತ್ರಿ 8ರಿಂದ ಬುಧವಾರ ಬೆಳಿಗ್ಗೆವರೆಗೆ ಪ್ರಸಿದ್ಧ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ. ಈ ನಡುವೆ ರಾತ್ರಿ 11ಗಂಟೆಗೆ ಜಮಖಂಡಿಯ ಜಿರ್ಲೆ ಪರಿವಾರದ 20ಕೆಜಿಯ ಬೆಳ್ಳಿ ಪಲ್ಲಕ್ಕಿಯೊಂದಿಗೆ ಪುರವಂತರು ಸಹಿತ ಅಪಾರ ಭಕ್ತರು ಅಗ್ನಿಪ್ರವೇಶ ಮಾಡುವರು.
ಬುಧವಾರ ಬೆಳಿಗ್ಗೆ ರುದ್ರಾಭಿಷೇಕ, ವಿಶೇಷ ಪೂಜೆ ನಡೆಯುವುದು. ಸಂಜೆ 4ಗಂಟೆಗೆ 3ಕಿ.ಮೀ ದೂರದ ಕೋರವಾರ ಗ್ರಾಮದಿಂದ ಹೊರಡುವ ನಂದಿಧ್ವಜ, ಕಳಸ ಮತ್ತು ಪುರವಂತರ ಭವ್ಯ ಮೆರವಣಿಗೆಯು ರಾತ್ರಿ 7ಗಂಟೆಗೆ ದೇವಸ್ಥಾನಕ್ಕೆ ತಲುಪುವುದು. ವಿದ್ಯುತ್ ದೀಪಗಳು ಮತ್ತು ಹೂವುಗಳಿಂದ ಅಲಂಕೃತಗೊಂಡ ಭವ್ಯರಥೋತ್ಸವ ರಾತ್ರಿ 8ಗಂಟೆಗೆ ಮದ್ದು ಸುಡುವುದರ ನಡುವೆ ವೈಭವದಿಂದ ಜರುಗುವುದು. ಗುರುವಾರ ಬೆಳಿಗ್ಗೆ 8ಗಂಟೆ ಮತ್ತು ಸಂಜೆ 4ಗಂಟೆಗೆ ಪ್ರಸಿದ್ಧ ಜಂಗಿ ಪೈಲ್ವಾನರಿಂದ ಕುಸ್ತಿ ಪಂದ್ಯಗಳು ನಡೆಯಲಿವೆ.
ಅಗ್ನಿಪ್ರವೇಶ ಮುಂದಿನವರ್ಷ ಹೊರಗಡೆ:
ಅಗ್ನಿಪ್ರವೇಶ ಮಾಡುವ ಭಕ್ತರ ಸಂಖ್ಯೆ ಪ್ರತಿವರ್ಷ ಹೆಚ್ಚಾಗುತ್ತಿದೆ. ಸದ್ಯದ ಸ್ಥಳ ಸಾಕಾಗದೆ ಭಕ್ತರು ತೊಂದರೆ ಅನುಭವಿಸುತ್ತಿದ್ದಾರೆ. ಆದರೂ ಈ ವರ್ಷ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಮುಂದಿನ ವರ್ಷ ಅಗ್ನಿಪ್ರವೇಶದ ಎಲ್ಲ ವ್ಯವಸ್ಥೆ ದೇವಸ್ಥಾನದ ಹೊರಗಡೆ ಮಾಡಲಾಗುವುದು. ಪ್ರಸ್ತುತ ಅನ್ನದಾಸೋಹ, ಅಗ್ನಿಶಾಮಕ, ಆರೋಗ್ಯ, ವಿದ್ಯುತ್, ನೀರು ಸೇರಿದಂತೆ ವಾಹನ ನಿಲುಗಡೆ ವ್ಯವಸ್ಥೆ ಆಗಿದೆ. 7ಕೌಂಟರ್ ಪೈಕಿ ಒಂದರಲ್ಲಿ ಸಹಾಯವಾಣಿ ಇರಲಿದೆ ಎಂದು ಕಾಳಗಿ ತಹಶೀಲ್ದಾರ್ ಪೃಥ್ವಿರಾಜ ಪಾಟೀಲ ತಿಳಿಸಿದ್ದಾರೆ.
ಬಿಗಿ ಬಂದೋಬಸ್ತ್: ಜಾತ್ರೆಯು ಶಾಂತಿಯುತವಾಗಿ ನಡೆಯಲು ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ನೇತೃತ್ವದಲ್ಲಿ 4 ಸಿಪಿಐ, 9 ಪಿಎಸ್ಐ, 26 ಎಎಸ್ಐ, 67 ಹೆಡ್ ಕಾನ್ಸ್ಟೆಬಲ್, 96 ಕಾನ್ಸ್ಟೆಬಲ್, 21 ಮಹಿಳಾ ಕಾನ್ಸ್ಟೆಬಲ್ ಹಾಗೂ 1 ಕೆಎಸ್ಆರ್ಪಿ, 2 ಡಿಎಆರ್ ವ್ಯಾನ್ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ ಎಂದು ಕಾಳಗಿ ಸಿಪಿಐ ಜಗದೇವಪ್ಪ ಪಾಳಾ ಹೇಳಿದರು.
ಈ ಭಾಗದ ಅತಿದೊಡ್ಡ ಕೋರವಾರ ಜಾತ್ರೆಯ ಯಶಸ್ಸಿಗಾಗಿ ಸಕಲ ಸಿದ್ಧತೆಗಳು ಕೈಗೊಳ್ಳಲಾಗಿದೆ. ಜಾತ್ರೆಯಲ್ಲಿ ರಾಜ್ಯ– ಹೊರರಾಜ್ಯಗಳ ಸಹಸ್ರಾರು ಭಕ್ತರು ಪಾಲ್ಗೊಳ್ಳುವರುಪೃಥ್ವಿರಾಜ ಪಾಟೀಲ ತಹಶೀಲ್ದಾರ್ ಹಾಗೂ ಅಧ್ಯಕ್ಷರು ದೇವಸ್ಥಾನ ಸಮಿತಿ ಕೋರವಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.