
ಚಿಂಚೋಳಿ: ತಾಲ್ಲೂಕಿನ ಇರಗಪಳ್ಳಿ ಗ್ರಾಮಕ್ಕೆ ದಶಕದ ನಂತರ ಮತ್ತೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಚಿಂಚೋಳಿ ಘಟಕದಿಂದ ಬಸ್ ಸೌಲಭ್ಯ ಕಲ್ಪಿಸಲಾಗಿದ್ದು ಗ್ರಾಮಕ್ಕೆ ಸೋಮವಾರ ಬಸ್ ಬಂದಾಗ, ಬಸ್ಗೆ ಬಾಳೆ ದಿಂಡು ಕಟ್ಟಿ, ಪೂಜೆ ಸಲ್ಲಿಸಿದ ಗ್ರಾಮಸ್ಥರು ಚಾಲಕ ಪ್ರಕಾಶ, ನಿರ್ವಾಹಕ ಮಾಳಪ್ಪ ಮತ್ತು ಸುಲೇಪೇಟ ಬಸ್ ನಿಲ್ದಾಣದ ನಿಯಂತ್ರಕರ ಶಿವರಾಮರೆಡ್ಡಿ ಭಕ್ತಂಪಳ್ಳಿ ಅವರನ್ನು ಸನ್ಮಾನಿಸಿದರು.
‘ರಾಯಚೂರು ವನ್ಮಾರಪಳ್ಳಿ ರಾಜ್ಯ ಹೆದ್ದಾರಿ 75ರಲ್ಲಿ ಬರುವ ಕೊರಡಂಪಳ್ಳಿಯಿಂದ ಇರಗಪಳ್ಳಿ ಗ್ರಾಮಕ್ಕೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿದ್ದರಿಂದ ಬಸ್ ಸೌಕರ್ಯ ಸ್ಥಗಿತವಾಗಿತ್ತು. ಸಚಿವ ಡಾ.ಶರಣಪ್ರಕಾಶ ಪಾಟೀಲರು ರಸ್ತೆ ನಿರ್ಮಾಣಕ್ಕೆ ಅಗತ್ಯ ಅನುದಾನ ಮಂಜೂರು ಮಾಡಿಸಿದ್ದರಿಂದ ರಸ್ತೆ ಪುನರ್ ನಿರ್ಮಾಣ ಮಾಡಲಾಗಿದೆ. ಇದರಿಂದ ಗ್ರಾಮಕ್ಕೆ ದಶಕದ ನಂತರ ಮತ್ತೆ ಸಾರಿಗೆ ಸೌಕರ್ಯ ಒದಗಿ ಬಂದಿದೆ’ ಎಂದು ಗ್ರಾಮದ ಮುಖಂಡ ನ್ಯಾಮತ್ ಪಟೇಲ್ ತಿಳಿಸಿದರು.
ಬಸ್ ಸೌಲಭ್ಯ ಇಲ್ಲದ ಕಾರಣ ಗ್ರಾಮಸ್ಥರಿಗೆ, ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿತ್ತು. ಪ್ರಯುಕ್ತ ಸಚಿವರಿಗೆ ತಿಳಿಸಿದಾಗ ಹೊಸದಾಗಿ ಬಸ್ ಸೌಲಭ್ಯ ಕಲ್ಪಿಸಲು ಘಟಕ ವ್ಯವಸ್ಥಾಪಕರಿಗೆ ಸೂಚಿಸಿದ್ದರು. ಘಟಕ ವ್ಯವಸ್ಥಾಪಕ ಸುರೇಶಕುಮಾರ ತೇಗಲತಿಪ್ಪಿ ಅವರು, ಸರ್ವೆ ಮಾಡಿ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ ಮಾರ್ಗದ ಅನುಮತಿ ಪಡೆದು ಬಸ್ ಸೌಲಭ್ಯ ಕಲ್ಪಿಸಿದ್ದಾರೆ. ಗ್ರಾಮಸ್ಥರ ಸಮಸ್ಯೆ ಸ್ಪಂದಿಸಿದ ಸಚಿವರು ಮತ್ತು ಘಟಕ ವ್ಯವಸ್ಥಾಪಕರಿಗೆ ಗ್ರಾಮಸ್ಥರು ಧನ್ಯವಾದ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸುಭಾನರೆಡ್ಡಿ ಪಟಮಿದಿ, ಮಂಜೂರು ಪಟೇಲ್, ಇಬ್ರಾಹಿಂ ಪಟೇಲ್, ರಿಯಾಜ್ ಪಟೇಲ್, ಸಂತೋಷ ತವದಿ, ಬಾಬುರಾವ್ ಉಪ್ಪಿನ್, ಮಾರುತಿ ತಳವಾರ, ಕೈಲಾಸ ಬೆನ್ನೂರು, ಜಗಪ್ಪ ಮೊಮ್ಮಾಯಿ, ಪ್ರಭು ಹಲಚೇರಿ, ನರಸಪ್ಪ ಹಲಚೇರಿ, ರಾಮಚಂದ್ರ ತಳವಾರ, ನಾಗೇಂದ್ರಪ್ಪ ಪೂಜಾರಿ, ಶ್ರೀನಾಥ ಅಕ್ಕಮಪಳ್ಳಿ, ಹಣಮಂತ ಹೊಸಮನಿ, ನಾಗೇಶ ಮಡಿವಾಳ ಮೊದಲಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.