ಕಲಬುರಗಿ: ‘ಕಲಾವಿದ ಬಸವರಾಜ ಜಾನೆ ಅವರನ್ನು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು’ ಎಂದು ಕಲಾವಿದ ದೌಲತರಾಯ ದೇಸಾಯಿ ಒತ್ತಾಯಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಲಬುರಗಿ ಕಲಾವಿದರ ತಾಣ. ಎಸ್.ಎಂ.ಪಂಡಿತ್, ಜೆ.ಎಸ್.ಖಂಡೇರಾವ ಹಾಗೂ ಡಾ. ವಿ.ಜಿ.ಅಂದಾನಿ ಅವರಂಥ ಕಲಾವಿದರನ್ನು ನೀಡಿದೆ. ಬಸವರಾಜ ಜಾನೆ ಅವರು ಕೂಡ ಉತ್ತಮ ಕಲಾವಿದರಾಗಿದ್ದಾರೆ. 2016 ರಲ್ಲಿ ರಾಜ್ಯ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಸಹ ಪಡೆದಿದ್ದಾರೆ’ ಎಂದರು.
ಕೃತ್ತಿಕ ಎಂಬ ಸಂಸ್ಥೆ ಕಟ್ಟಿ ಆರ್ಟ್ ಗ್ಯಾಲರಿ ನಿರ್ಮಿಸಿ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಯುವ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ. ಅಕಾಡೆಮಿ ಸ್ಥಾಪನೆಯಾದಾಗಿನಿಂದ ಇಲ್ಲಿಯವರೆಗೂ ದಲಿತ ಸಮುದಾಯದ ಒಬ್ಬರು ಮಾತ್ರ ಅಧ್ಯಕ್ಷರಾಗಿದ್ದಾರೆ. ಅಲ್ಲದೆ, ಈ ಅಕಾಡೆಮಿಗೆ ಬಹುತೇಕ ದಕ್ಷಿಣ ಹಾಗೂ ಕರಾವಳಿ ಕರ್ನಾಟಕದ ಕಲಾವಿದರೇ ಅಧ್ಯಕ್ಷರಾಗುತ್ತಿದ್ದಾರೆ. ಅವರು ಈ ಭಾಗದ ಕಲಾವಿದರ ಸಮಸ್ಯೆಗಳನ್ನು ಸಮರ್ಪಕವಾಗಿ ಪ್ರಸ್ತುತ ಪಡಿಸುತ್ತಿಲ್ಲ. ಆದ್ದರಿಂದ ಕಲ್ಯಾಣ ಕರ್ನಾಟಕ ಭಾಗದ ಕಲಾವಿದರು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಬಸವರಾಜ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಈ ಭಾಗಕ್ಕೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಕಲಾವಿದರಾದ ಪಿ.ಪರಶುರಾಮ, ಸೂರ್ಯಕಾಂತ ನಂದೂರ, ಮಂಜುಳಾ ಜಾನೆ ಹಾಗೂ ರಾಜಕುಮಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.