ಕಾಳಗಿ: ತಾಲ್ಲೂಕಿನ ಹಲಚೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾವದಗಿ ಗ್ರಾಮದ ಹೊಲವೊಂದರಲ್ಲಿ ಜೋಪಡಿ ಹಾಕಿಕೊಂಡು 6 ತಿಂಗಳಿಂದ ವಾಸವಿರುವ ಮಹಾರಾಷ್ಟ್ರದ ರಾಯಗಡ ಜಿಲ್ಲೆಯ 10 ಬಡ ಕುಟುಂಬಗಳು ಕೊರೊನಾ ಹಿನ್ನೆಲೆಯ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಾಲಿ ಮುಳ್ಳಿನ ಗಿಡಗಳನ್ನು ಕಡಿದು ಇದ್ದಲು ಮಾಡಿ ಮಾರಾಟ ಮಾಡುತ್ತ ಜೀವನ ಸಾಗಿಸುತ್ತಿದ್ದ ಇವರಿಗೆ ಮಹಾಮಾರಿ ಕೊರೊನಾ ಲಾಕ್ ಡೌನ್ನಿಂದಾಗಿ ಕೆಲಸ ನಿಂತುಹೋಗಿ ಊಟಕ್ಕೂ ಗತಿ ಇಲ್ಲದಂತಾಗಿದೆ.
ಮಹಿಳೆಯರು, ಮಕ್ಕಳು ಈ ಕುಟುಂಬಗಳು ಯಾವುದೇ ರೀತಿಯ ಆರ್ಥಿಕ ನೆರವು, ಅನ್ನ, ಆಸರೆಯ ಸಹಾಯವಿಲ್ಲದೆ ನರಳಾಟದ ಬದುಕು ನಡೆಸುತ್ತಿದ್ದಾರೆ. ಇನ್ನೇನು ಲಾಕ್ ಡೌನ್ ಮುಗಿದಿದೆ, ಕೆಲಸ ಮಾಡಿ ಹಸಿವಿನ ಚೀಲ ತುಂಬಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಪಕ್ಕದ ಕೋಡ್ಲಿ ಗ್ರಾಮದಲ್ಲಿ ಮೇ 4ರಂದು ಕೋವಿಡ್ ಸೋಂಕು ದೃಢಪಟ್ಟು ಈ ಪ್ರದೇಶ ಮತ್ತಷ್ಟು ಬಿಗಿಗೊಂಡಿದೆ.
ತೀವ್ರ ತೊಂದರೆಗೆ ಸಿಲುಕಿರುವ ಇವರು ಈಗ ಸಹಾಯಕ್ಕೆ ಅಂಗಲಾಚುತ್ತಿದ್ದಾರೆ. ಈ ಕುರಿತು ತಾಲ್ಲೂಕಿನ ತಹಶೀಲ್ದಾರ್ ನೀಲಪ್ರಭಾ ಬಬಲಾದ ಗಮನಕ್ಕೆ ತರಲಾಗಿದ್ದರೂ ಅವರು ಸಹಾಯಕ್ಕೆ ಬಾರದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಭಾರತ ಮುಕ್ತಿ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಾರುತಿ ಗಂಜಗಿರಿ, ಮುಖಂಡ ಸಂತೋಷ ಮಾಳಗಿ ದೂರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆಗೆ ತಹಶೀಲ್ದಾರರು ಮೊಬೈಲ್ ಕರೆ ಸ್ವೀಕರಿಸಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.