ADVERTISEMENT

‘ಗಾಂಧೀಜಿಯವರ ಪ್ರಭಾವ ಸಾರ್ವತ್ರಿಕ’

ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 16:02 IST
Last Updated 2 ಅಕ್ಟೋಬರ್ 2024, 16:02 IST
ಆಳಂದ ತಾಲ್ಲೂಕಿನ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬುಧವಾರ ಮಹಾತ್ಮ ಗಾಂಧಿ ಮತ್ತು ಲಾಲ್‌ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು
ಆಳಂದ ತಾಲ್ಲೂಕಿನ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬುಧವಾರ ಮಹಾತ್ಮ ಗಾಂಧಿ ಮತ್ತು ಲಾಲ್‌ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು   

ಕಲಬುರಗಿ: ‘ಗಾಂಧೀಜಿಯವರ ಪ್ರಭಾವ ಸಾರ್ವತ್ರಿಕ’ ಎಂದು ಪ್ರಾಧ್ಯಾಪಕ ಮನೋಹರ ಪಿ.ಜೋಶಿ ಅಭಿಪ್ರಾಯಪಟ್ಟರು.

ಆಳಂದ ತಾಲ್ಲೂಕಿನ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಮಹಾತ್ಮ ಗಾಂಧಿ ಮತ್ತು ಲಾಲ್‌ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಗಾಂಧೀಜಿಯವರು ನೆಲ್ಸನ್ ಮಂಡೇಲಾ ಅವರಂಥ ಜಾಗತಿಕ ನಾಯಕರ ಮೇಲೂ ಪ್ರಭಾವ ಬೀರಿದ್ದರು. ಅವರ ಜೀವನ, ಸಂದೇಶ ಹಾಗೂ ಪ್ರಯೋಗಗಳಿಂದ ಕೂಡಿದೆ. ಸತ್ಯ, ಅಹಿಂಸೆ, ಸತ್ಯಾಗ್ರಹ, ಸರ್ವೋದಯ, ಸ್ವರಾಜ್ ಹಾಗೂ ಸ್ವದೇಶಿ ಅವರ ಪ್ರಮುಖ ತತ್ವಗಳಾಗಿವೆ. ಅವರ ತತ್ವಗಳ ಮೂಲಕ ಅವರು ಇಂದಿಗೂ ಪ್ರಸ್ತುತರಾಗಿದ್ದಾರೆ ಎಂದು ಹೇಳಿದರು.

ADVERTISEMENT

ಇಂದಿನ ಪೀಳಿಗೆ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಗಾಂಧಿಯನ್ನು ಓದಬೇಕು. ಅವರ ತತ್ವ ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ.ಬುಟ್ಟು ಸತ್ಯನಾರಾಯಣ,‘ಮಹಾತ್ಮ ಗಾಂಧೀಜಿಯವರ ಕೊಡುಗೆಯಿಂದ ಇಂದು ನಮ್ಮ ದೇಶ ಸ್ವತಂತ್ರ ರಾಷ್ಟ್ರವಾಗಿದೆ. ಗಾಂಧೀಜಿಯವರು ಸ್ವಾವಲಂಬಿ ಗ್ರಾಮಗಳ ಅಗತ್ಯತೆಯನ್ನು ಪ್ರತಿಪಾದಿಸಿದ್ದರು. ಹಾಗಾಗಿ ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ಯುವಜನರು ಮುಂದಾಳತ್ವ ವಹಿಸಿ ಗ್ರಾಮಗಳನ್ನು ಅಭಿವೃದ್ಧಿಪಡಿಸಬೇಕು’ ಎಂದು ಹೇಳಿದರು.

ದೇಶದ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ಶಾಸ್ತ್ರಿಯವರು ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ ಮಾತನಾಡಿದರು. ಇದೇ ಸಂದರ್ಭದಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನದ ಅಂಗವಾಗಿ ಆಯೋಜಿಸಲಾಗಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಸ್ವಚ್ಛತಾ ಹೀ ಸೇವಾ ಆಂದೋಲನದ ನೋಡಲ್ ಅಧಿಕಾರಿ ಗಣಪತಿ ಬಿ.ಸಿನ್ನೂರ ಸ್ವಾಗತಿಸಿ, ವಿವಿಧ ಚಟುವಟಿಕೆಗಳ ವರದಿ ಮಂಡಿಸಿದರು.

ಪ್ರೊ.ಚನ್ನವೀರ ಆರ್.ಎಂ., ಪ್ರೊ.ವಿಕ್ರಂ ವಿಸಾಜಿ, ಪ್ರೊ.ಬಸವರಾಜ ಕುಬಕಡ್ಡಿ, ಪ್ರೊ.ಜಿ.ಆರ್.ಅಂಗಡಿ, ಪ್ರೊ.ಆರ್.ಎಸ್.ಹೆಗಡಿ, ವಿವಿಧ ವಿಭಾಗಗಳ ಡೀನ್‌ಗಳು, ಮುಖ್ಯಸ್ಥರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಪ್ರಕಾಶ ಬಾಳಿಕಾಯಿ ನಿರೂಪಿಸಿದರು. ಶಿವಂ ಮಿಶ್ರಾ ವಂದಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.