ADVERTISEMENT

ಸೇಡಂ: ಮಧ್ಯಾಹ್ನದ ಬಿಸಿಯೂಟ ಸೇವಿಸಿ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 17:37 IST
Last Updated 14 ಫೆಬ್ರುವರಿ 2020, 17:37 IST
ಬಿಸಿಯೂಟ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ
ಬಿಸಿಯೂಟ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ   

ಸೇಡಂ (ಕಲಬುರ್ಗಿ): ತಾಲ್ಲೂಕಿನ ಶಿಲಾರಕೋಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಮಧ್ಯಾಹ್ನದ ಬಿಸಿಯೂಟ ಸೇವಿಸಿದ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ಪಸ್ಥರಾದರು.

ಶಾಲೆಯಲ್ಲಿ ಒಟ್ಟು 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಅದರಲ್ಲಿ ಮಧ್ಯಾಹ್ನ 150ಕ್ಕೂ ಅಧಿಕ ವಿದ್ಯಾರ್ಥಿಗಳು ಬಿಸಿಯೂಟ ಸೇವಿಸಿದ್ದಾರೆ. ಆದರೆ, 70ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಶಾಲೆ ಬಿಟ್ಟ ನಂತರ ಮನೆಗೆ ತೆರಳುವಾಗ ವಿದ್ಯಾರ್ಥಿಗಳಿಗೆ ತಲೆ ಸುತ್ತುವುದು, ವಾಂತಿ, ಮೈನೋವು, ನಿಶಕ್ತಿ, ಅಲ್ಲದೆ ಕೈ-ಕಾಲು ನೋವು ಸೇರಿದಂತೆ ವಿವಿಧ ಲಕ್ಷಣಗಳು ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಂಡಿವೆ.

ಇದರಿಂದಾಗಿ ಪಾಲಕರಲ್ಲಿ ಆತಂಕ ಮೂಡಿದ್ದು, ಕೂಡಲೇ ಶಾಲೆಯ ಶಿಕ್ಷಕರನ್ನು ಸಂಪರ್ಕಿಸಿ ಪುನಃ ಗ್ರಾಮಕ್ಕೆ ಕರೆಸಿದ್ದಾರೆ. ಗ್ರಾಮಸ್ಥರು ಮತ್ತು ಶಾಲೆಯ ಮುಖ್ಯಶಿಕ್ಷಕ ರಾಮಚಂದ್ರ ಅವರ ಸಹಕಾರದಿಂದ ವಿದ್ಯಾರ್ಥಿಗಳನ್ನು ತಾಲ್ಲೂಕಿನ ಮುಧೋಳ ಗ್ರಾಮದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು.‌ ಖಾಸಗಿ ವೈದ್ಯರು ಸಹ ವಿದ್ಯಾರ್ಥಿಗಳನ್ನು ಪರೀಕ್ಷಿಸಿದರು.

ADVERTISEMENT

ವೈದ್ಯ ಡಾ.ಸದಾಶಿವ ಅವರು ಮಕ್ಕಳ ಆರೋಗ್ಯ ತಪಾಸಣೆ ನಡೆಸಿದರು. ಶಾಲೆಗೆ ಗುರುವಾರ ಹೊಸ ಅಕ್ಕಿ ಬಂದಿದೆ. ಇವತ್ತು ಅಕ್ಕಿ ಬಳಸಿ ಅಡುಗೆ ಮಾಡಲಾಗಿದೆ. ಊಟ ಮಾಡಿದ ನಂತರ ಯಾವುದೇ ರೀತಿಯಲ್ಲಿ ಸಮಸ್ಯೆಯಾಗಿಲ್ಲ. ಆದರೆ, ಊಟದ ನಂತರ ಕೆಲವು ಗಂಟೆಗಳ ನಂತರ ಸಮಸ್ಯೆಯಾಗಿದೆ. ನಿರ್ದಿಷ್ಟವಾಗಿ ಈ ಘಟನೆಗೆ ಅಕ್ಕಿ, ತರಕಾರಿ ಅಥವಾ ನೀರು ಕಾರಣವೇ ಎಂದು ಗೊತ್ತಾಗಿಲ್ಲ’ ಎಂದು ಮುಖ್ಯಶಿಕ್ಷಕ ರಾಮಚಂದ್ರ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವರೆಡ್ಡಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರವಿಕುಮಾರ್ ಕೋಡ್ಲಾ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿದರು. ಮುಖಂಡರಾದ ನಾಗೇಂದ್ರಪ್ಪ ಶಿಲಾರಕೋಟ, ಡಾ. ಮಧುಸೂದನರೆಡ್ಡಿ ಶಿಲಾರಕೋಟ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.