ADVERTISEMENT

ನಾನು ಅಖಂಡ ಕರ್ನಾಟಕಕ್ಕೆ ಮುಖ್ಯಮಂತ್ರಿಯಾಗಬೇಕು: ಸಚಿವ ಉಮೇಶ ಕತ್ತಿ 

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 13:01 IST
Last Updated 27 ಜೂನ್ 2022, 13:01 IST
   

ಚಿಂಚೋಳಿ (ಕಲಬುರಗಿ ಜಿಲ್ಲೆ): ನಾನು ಹಿರಿಯ ಶಾಸಕ. 9 ಬಾರಿ ಗೆದ್ದವನು. ಸಹಜವಾಗಿಯೇ ನಾನು ಅಖಂಡ ಕರ್ನಾಟಕದ ಮುಖ್ಯಮಂತ್ರಿಯಾಗಬೇಕು. ಭವಿಷ್ಯದಲ್ಲಿ ಉತ್ತರ ಕರ್ನಾಟಕದ ಮುಖ್ಯಮಂತ್ರಿಯಾಗಿ‌ ನನ್ನ ಮಕ್ಕಳು ಆದರೆ ಆಗಲಿ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಅರಣ್ಯ ಸಚಿವ ಉಮೇಶ ಕತ್ತಿ ತಿಳಿಸಿದರು.

ತಾಲ್ಲೂಕಿನ ಪೋಲಕಪಳ್ಳಿಯಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, '2024ರ ನಂತರ ದೇಶದಲ್ಲಿ ರಾಜ್ಯಗಳ ಸಂಖ್ಯೆ ಹೆಚ್ಚಾಗಲಿವೆ. ಉತ್ತರ ಪ್ರದೇಶ 4, ಮಹಾರಾಷ್ಟ್ರ 3, ಕರ್ನಾಟಕ 2 ರಾಜ್ಯಗಳಾಗಲಿವೆ. ಉತ್ತರ ಕರ್ನಾಟಕ ರಾಜ್ಯದ ಹೇಳಿಕೆಗೆ ನಾನು ಬದ್ಧ. ಆದರೆ ನಾನು ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆಗುವೆ' ಎಂದು ಬಯಕೆ ವ್ಯಕ್ತಪಡಿಸಿದರು.

'ಕುಂಚಾವರಂ ವನ್ಯಜೀವಿ ಧಾಮದಲ್ಲಿರುವ ಶೇರಿಭಿಕನಳ್ಳಿ ಗ್ರಾಮವನ್ನು ಮುಂದಿನ 6 ತಿಂಗಳಲ್ಲಿ ಸ್ಥಳಾಂತರಿಸಲು ಕ್ರಮ‌ ಕೈಗೊಳ್ಳಲಾಗುವುದು' ಎಂದರು.

ADVERTISEMENT

ಚಿಂಚೋಳಿಯಲ್ಲಿ ಅರಣ್ಯ ಕಾಲೇಜು ಮ‌ಂಜೂರು ಮಾಡುವ ಭರವಸೆ ನೀಡಿದ ಸಚಿವರು, ಜತೆಗೆ ಚಂದ್ರಂಪಳ್ಳಿಯಲ್ಲಿ‌ ₹ 2 ಕೋಟಿ ವೆಚ್ಚದಲ್ಲಿ‌ ಜಂಗಲ್ ಲಾಡ್ಜ್ ಮತ್ತು 4 ಕಾಟೇಜು‌ ನಿರ್ಮಿಸಿ‌ ಪ್ರವಾಸೋದ್ಯಮಕ್ಕೆ ಒತ್ತು‌ ನೀಡಲಾಗುವುದು, ಇವುಗಳಿಗೆ ಮುಂದಿನ ತಿಂಗಳು ಅಡಿಗಲ್ಲು ನೆರವೇರಿಸಲಾಗುವುದು. ಈ ಭಾಗದ ಅಭಿವೃದ್ದಿಗೆ ಎಲ್ಲಾ ರೀತಿಯ ಸಹಕಾರ ನೀಡುವೆ ಎಂದು ಭರವಸೆ ನೀಡಿದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.