ADVERTISEMENT

ಸಚಿವರ ಪುತ್ರಿಯ ಬೆಳೆ ವಿಮೆ ಹಣ ಬೇರೆಯವರ ಖಾತೆಗೆ!

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2024, 0:08 IST
Last Updated 12 ಫೆಬ್ರುವರಿ 2024, 0:08 IST
   

ಮಾನ್ವಿ (ರಾಯಚೂರು ಜಿಲ್ಲೆ): ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌.ಎಸ್. ಬೋಸರಾಜು ಅವರ ಪುತ್ರಿಯ ಹೆಸರಿನಲ್ಲಿರುವ ಜಮೀನಿನ ಬೆಳೆ ವಿಮೆ ಪರಿಹಾರದ ಹಣ ಬೇರೆಯವರ ಖಾತೆಗೆ ಜಮಾ ಆಗಿರುವ ಸಂಗತಿ ಬೆಳಕಿಗೆ ಬಂದಿದ್ದು, ಈ ಕುರಿತು ಗ್ರಾಮದ ಮುಖಂಡರೊಬ್ಬರು ಕೃಷಿ ಇಲಾಖೆಗೆ ದೂರು ನೀಡಿದ್ದಾರೆ. 

ಬೋಸರಾಜು ಪುತ್ರಿ ಎನ್.ವಾಣಿ ಹೆಸರಿನಲ್ಲಿ ಭೋಗಾವತಿ ಸೀಮೆಯಲ್ಲಿರುವ 7 ಎಕರೆ 10 ಗುಂಟೆ ಜಮೀನಿನ ಭತ್ತದ ಬೆಳೆಗೆ ₹5,046.31 ವಿಮೆ ಕಂತು ಹಣವನ್ನು ವಾಣಿ ಪಾವತಿಸಿದ್ದರು. ಅದರ ಪರಿಹಾರ ಹಣ ₹1,01,180 ಶರಣಗೌಡ ದೊಡ್ಡಬಸವನಗೌಡ ಪೊಲೀಸ್ ಪಾಟೀಲ ಎಂಬವರ ಖಾತೆಗೆ ಜಮಾ ಆಗಿದೆ. ವಾಣಿ ಅವರ ಹೆಸರಿನಲ್ಲಿರುವ ಮತ್ತೊಂದು ಜಮೀನಿನ ಪರಿಹಾರ ಹಣ ₹1,11,374.6 ಲಕ್ಷ್ಮಿದೇವಿ ಗೌಡಪ್ಪ ಅವರ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎಂದು ದೂರುದಾರ ಶಿವಾರ್ಜುನ ನಾಯಕ ತಿಳಿಸಿದ್ದಾರೆ.

ಹೀಗೆ ಒಟ್ಟು ₹2 ಕೋಟಿ ಹಣ ಬೇರೆಯವರ ಬ್ಯಾಂಕ್ ಖಾತೆಗೆ ಜಮಾ ಆಗಿರುವುದು ಪತ್ತೆಯಾಗಿದೆ. ಈ ಕುರಿತು ಅಮರೇಶ್ವರ ಕ್ಯಾಂಪ್‌ನ ಶಿವಾರ್ಜುನ ನಾಯಕ ದಾಖಲೆಗಳ ಸಮೇತ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ.

ADVERTISEMENT

ಕಳೆದ ವರ್ಷ ಹಳ್ಳಿಹೊಸೂರು ಮತ್ತು ಮಾಡಗಿರಿ ಗ್ರಾಮಗಳಲ್ಲಿ ಪಿ.ಎಂ. ಫಸಲ್ ಬಿಮಾ ಯೋಜನೆಯ ಹಣ ದುರುಪಯೋಗದ ಕುರಿತು ಕೃಷಿ ಇಲಾಖೆ ಅಧಿಕಾರಿಗಳು ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಕುರಿತು ಸಿಐಡಿ ತನಿಖೆ ನಡೆಯುತ್ತಿರುವ ಹಂತದಲ್ಲಿಯೇ ಅಕ್ರಮ ಪುನರಾವರ್ತನೆಯಾಗಿರುವ ಆರೋಪ ಕೇಳಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.