ADVERTISEMENT

ಅಪ್ಪ–ಮಗನಿಗೆ ಸ್ವಪಕ್ಷೀಯರನ್ನು ಸೋಲಿಸುವುದೇ ದಂಧೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ

ಬಿಎಸ್‌ವೈ, ವಿಜಯೇಂದ್ರ ವಿರುದ್ಧ ಯತ್ನಾಳ ಆರೋಪ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2024, 16:12 IST
Last Updated 12 ಮಾರ್ಚ್ 2024, 16:12 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ಕಲಬುರಗಿ: ‘ಅಪ್ಪ–ಮಗ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರಗೆ ಪಕ್ಷದಲ್ಲಿ ತಮಗೆ ಬೇಡವಾದ ಅಭ್ಯರ್ಥಿಗಳನ್ನು ಸೋಲಿಸುವುದೇ ದಂಧೆಯಾಗಿದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಿಎಸ್‌ವೈ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಹಿಂದೆ ನನ್ನನ್ನು ಸೋಲಿಸಲು ವಿಜಯೇಂದ್ರ ಹಣ ಕಳುಹಿಸಿದ್ದ. ಯಡಿಯೂರಪ್ಪ ಕುಟುಂಬದಲ್ಲಿ ಒಬ್ಬ ಮಗ ಕ್ಯಾಬಿನೆಟ್ ಮಂತ್ರಿಯಾಗಬೇಕು, ಇನ್ನೊಬ್ಬ ಮಗ ಮುಖ್ಯಮಂತ್ರಿಯಾಗಬೇಕು. ಇನ್ನು ಅವರ ಮನೆಯ ಕೆಲವರು ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಸದಸ್ಯರಾಗಬೇಕು. ಇದು ಯಡಿಯೂರಪ್ಪ ಅವರ ಕೊನೆಯ ಕನಸು’ ಎಂದು ಹರಿಹಾಯ್ದರು.

‘ಯಡಿಯೂರಪ್ಪ ಯಾವೊಬ್ಬ ಲಿಂಗಾಯತರನ್ನೂ ಉದ್ಧಾರ ಮಾಡಿಲ್ಲ. ಅವರು ಲಿಂಗಾಯತರೇ ಅಲ್ಲ. ಅವರ ಹಿಂದೆ ಕೆಲವು ಸ್ವಾಮೀಜಿಗಳಿದ್ದಾರೆ. ಹಣ ನೀಡುತ್ತಾನೆ ಅಂತ ಸ್ವಾಮೀಜಿಗಳು ಆತನಿಗೆ ತಥಾಸ್ತು ಎನ್ನುತ್ತಾರೆ’ ಎಂದು ಏಕವಚನದಲ್ಲಿ ಟೀಕಿಸಿದರು.

ADVERTISEMENT

‘ಲೋಕಸಭೆ ಚುನಾವಣೆ ಬಳಿಕ ಯಡಿಯೂರಪ್ಪನ ಇನ್ನಷ್ಟು ಬಂಡವಾಳ ಬಯಲು ಮಾಡುತ್ತೇನೆ’ ಎಂದು ಯತ್ನಾಳ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.