ADVERTISEMENT

ಕಮಲಾಪುರದಲ್ಲಿ ವ್ಯಕ್ತಿ ನಿಗೂಢ ಸಾವು: ಕೊಲೆ ಶಂಕೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 6:11 IST
Last Updated 7 ಡಿಸೆಂಬರ್ 2021, 6:11 IST
   

ಕಮಲಾಪುರ (ಕಲಬುರಗಿ ಜಿಲ್ಲೆ):ತಾಲ್ಲೂಕಿನ ಬೆಳಕೋಟಾ ಗ್ರಾಮದ ಸಿದ್ದಪ್ಪ ಅಂಬಣ್ಣ ಸಿಂಗೆ (35) ಅವರ ಶವ ಮಂಗಳವಾರ ಕಮಲಾಪುರ ಸಮೀಪದ ನಾವದಗಿ ಹನುಮಾನ ದೇವಾಲಯ ಪಕ್ಕದ ಹೊಲವೊಂದರಲ್ಲಿ ಪತ್ತೆಯಾಗಿದ್ದು ಕುಟುಂಬಸ್ಥರು ಕೊಲೆ ಶಂಕೆ ವ್ಯೆಕ್ತ ಪಡಿಸಿದ್ದಾರೆ.

ಕಮಲಾಪುರ ಸಮೀಪದ ನವನಿಹಾಳಸತ್ಯ ಸಾಯಿ ವಿಶ್ವ ವಿದ್ಯಾಲಯದಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದರು. ಸೋಮವಾರ ಬೆಳಿಗ್ಗೆ ಕೆಲಸಕ್ಕೆ ತೆರಳಿದ್ದರು. ರಾತ್ರಿಯಾದರೂ ಮನೆಗೆ ಮರಳದಿದ್ದಾಗ ಕರೆ ಮಾಡಿದ್ದು ಸ್ವಿಚ್ಆಫ್ ಆಗಿರುವುದಾಗಿ ತಿಳಿದು ಬಂದಿದೆ. ನಂತರ ಸತ್ಯ ಸಾಯಿ ವಿಶ್ವವಿದ್ಯಾಲಯದಲ್ಲಿ ವಿಚಾರಿಸಿದಾಗ ಕೆಲಸ ಮುಗಿಸಿ ಸಂಜೆ ಕಮಲಾಪುರ ಕಡೆ ತೆರಳಿರುವುದಾಗಿ ಅಲ್ಲಿನ ಕಾರ್ಮಿಕರು ತಿಳಿಸಿದ್ದಾರೆ.

ಕುಟುಂಬಸ್ಥರು ರಾತ್ರಿಯಿಡಿ ಹುಡುಕಾಡಿದ್ದಾರೆ. ಕಮಲಾಪುರ ತಾಲ್ಲೂಕಿನ ನಾವದಗಿ (ಬಿ) ಸಿದ್ದಪ್ಪ ಪತ್ನಿಯ ತವರಾಗಿದ್ದು, ಆ ಕಡೆ ಕುಟುಂಬಸ್ಥರು ಹುಡುಕುತ್ತ ತೆರಳಿದ್ದಾರೆ. ರಾಷ್ಟೀಯ ಹೆದ್ದಾರಿ ಪಕ್ಕದ ತೊಗರಿ ಹೊಲವೊಂದರಲ್ಲಿ ಸಿದ್ದಪ್ಪ ಬೈಕ್ ಪತ್ತೆಯಾಗಿದೆ. ಮುಂದೆ ತೆರಳಿ ನೋಡಿದಾಗ ಒಂದೆಡೆ ಗಿಡಕ್ಕೆ ಕಟ್ಟಿದ ಮತ್ತೊಂದೆಡೆ ಕುತ್ತಿಗೆಗೆ ಹಗ್ಗ ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಬಟ್ಟೆ ಬಿಚ್ಚಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ. ಹೀಗಾಗಿ ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ADVERTISEMENT

ಕಮಲಾಪುರ ಪೊಲೀಸ್ ಠಾಣೆ ಪಿಎಸ್ಐ ಭೀಮರಾಯ ಪಾಟೀಲ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.