ಕಲಬುರಗಿ: ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಉತ್ಸವವನ್ನು ಸೆ.16ರಂದು ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದು, ಚಿತ್ರನಟ ವಿಜಯರಾಘವೇಂದ್ರ ವಿಶೇಷ ಅತಿಯಾಗಿ ಭಾಗವಹಿಸಲಿದ್ದಾರೆ ಎಂದು ಜಯಂತಿಯ ಆಚರಣೆಯ ಜಿಲ್ಲಾ ಅಧ್ಯಕ್ಷ ವಿನಯ್ ಗುತ್ತೇದಾರ ಗಾರಂಪಳ್ಳಿ ತಿಳಿಸಿದ್ದಾರೆ.
ವಿವಿಧ ಮಠಾಧೀಶರು, ಸಚಿವರು, ಶಾಸಕರು, ಮುಖಂಡರು ಹಾಗೂ ಆರ್ಯ ಈಡಿಗ ಸಮಿತಿ ಸದಸ್ಯರು ಭಾಗವಹಿಸಲಿದ್ದಾರೆ. ಬೆಳಿಗ್ಗೆ 9.30ಕ್ಕೆ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಸಾಂಸ್ಕೃತಿಕ ವೈಭವದ ಶೋಭಾಯಾತ್ರೆ ನಡೆಯಲಿದೆ. ಜಯಂತಿ ಉತ್ಸವದ ಸ್ಮರಣೆಗಾಗಿ ಶಿಲ್ಪಕಲಾವಿದ ಕುಂದಾಪುರದ ಕೃಷ್ಣ ನಾಯಕ್ ನಿರ್ಮಾಣ ಮಾಡಿದ ಐದು ಅಡಿ ಎತ್ತರದ ಬ್ರಹ್ಮಶ್ರೀ ನಾರಾಯಣ ಗುರುಗಳ ನೂತನ ಮೂರ್ತಿ ಮೆರವಣಿಗೆ ನಡೆಯಲಿದೆ. ನಟ ವಿಜಯರಾಘವೇಂದ್ರ ಅವರು ತೆರೆದ ಜೀಪಿನಲ್ಲಿ ಮೆರವಣಿಗೆಯಲ್ಲಿ ರಂಗಮಂದಿರಕ್ಕೆ ಆಗಮಿಸಲಿದ್ದಾರೆ.
ನಗರದ ಜೀವಾ ಆಸ್ಪತ್ರೆಯ ಸಹಯೋಗದಲ್ಲಿ ಡಾ.ಸುಶೀಲ್ ಗುತ್ತೇದಾರ ಮತ್ತು ಡಾ. ಅಜಯ್ ಗುತ್ತೇದಾರ ನೇತೃತ್ವದಲ್ಲಿ ಬೆಳಿಗ್ಗೆ 9.30ರಿಂದ ಸಂಜೆಯವರೆಗೆ ಆರೋಗ್ಯ ಉಚಿತ ತಪಾಸಣೆ ಮತ್ತು ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಎಲುಗು ಮತ್ತು ಕೀಲು, ಚರ್ಮ, ಹೃದಯ ಸೇರೆ ಇತರ ತಜ್ಞ ವೈದ್ಯರು ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಆರೋಗ್ಯ ಶಿಬಿರದ ಸದುಪಯೋಗ ಪಡೆಯುವಂತೆ ಅವರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.