ADVERTISEMENT

ದೇಶದ ಹಿತಕ್ಕಿಂತ ಮೋದಿಯವರಿಗೆ ಕ್ರಿಕೆಟ್ ದೊಡ್ಡದಾಯಿತೇ: ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 6:40 IST
Last Updated 15 ಸೆಪ್ಟೆಂಬರ್ 2025, 6:40 IST
<div class="paragraphs"><p>ಪ್ರಿಯಾಂಕ್ ಖರ್ಗೆ</p></div>

ಪ್ರಿಯಾಂಕ್ ಖರ್ಗೆ

   

ಕಲಬುರಗಿ: ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳು ಕಾಶ್ಮೀರಕ್ಕೆ ನುಗ್ಗಿ ದೇಶದ ನಿವಾಸಿಗಳು ಹಾಗೂ ಸೈನಿಕರನ್ನು ಕೊಂದು ಹಾಕಿದ್ದಾರೆ. ಆದರೂ ಭಾರತ ತಂಡ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುವ ಮೂಲಕ ನರೇಂದ್ರ ಮೋದಿ ಅವರದು ಹುಸಿ ದೇಶಭಕ್ತಿ ಎಂಬುದು ಜಗಜ್ಜಾಹೀರಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಲಂಕಾದಲ್ಲಿ ತಮಿಳರ ಮೇಲೆ ದೌರ್ಜನ್ಯ ನಡೆದಾಗ ಭಾರತ ತಂಡ ಏಷ್ಯಾ ಕಪ್ ಬಹಿಷ್ಕರಿಸಿತ್ತು. ಎಷ್ಟೋ ದೇಶಗಳು ತಮ್ಮ ಜನಗಳ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಒಲಿಂಪಿಕ್ಸ್ ಕೂಟವನ್ನು ಬಹಿಷ್ಕರಿಸಿವೆ. ಏಷ್ಯಾ ಕಪ್ ನಲ್ಲಿ ಆಡದಿದ್ದರೆ ಬಿಸಿಸಿಐಗೆ ಪಾಯಿಂಟ್ಸ್‌ ಕಡಿಮೆಯಾಗುತ್ತಿದ್ದವು ಎಂದು ಸಮಜಾಯಿಷಿ ಕೊಡುತ್ತಿದ್ದಾರೆ. ದೇಶದ ಸ್ವಾಭಿಮಾನದ ಮುಂದೆ ಕ್ರಿಕೆಟ್ ಹಿತಾಸಕ್ತಿ ಮುಖ್ಯವಾಯಿತೇ? ಮೋದಿ ಅವರು ಮೋಟಾಭಾಯಿ (ಅಮಿತ್ ಶಾ) ಗೆ ಕರೆ ಮಾಡಿ ಐಸಿಸಿ ಅಧ್ಯಕ್ಷರಾಗಿರುವ ಅವರ ಪುತ್ರ ಜಯ್ ಷಾಗೆ ಬುದ್ಧಿ ಹೇಳಿ ಮ್ಯಾಚ್ ನಿಲ್ಲಿಸಬಹುದಿತ್ತಲ್ಲವೇ? ಎಂದರು.

ADVERTISEMENT

ಬಿಜೆಪಿಯವರು ಕಂಡವರ ಮಕ್ಕಳಿಗೆ ಕೇಸರಿ ಶಾಲು ಕೊಟ್ಟು ಧರ್ಮ ರಕ್ಷಣೆ ಮಾಡುವಂತೆ ಹೇಳುತ್ತಾರೆ. ಸಿ.ಟಿ. ರವಿ ಎಂದಾದರೂ ತಮ್ಮ ಮಗನಿಗೆ ಇನ್ನೊಬ್ಬರ ತಲೆ ಕಡಿ, ತೊಡೆ ಮುರಿ, ಮಸೀದಿ ಎದುರು‌ ಹೋಗುವ ಮೆರವಣಿಗೆಯಲ್ಲಿ ಭಾಗವಹಿಸು ಎಂದು ಹೇಳಿದ್ದಾರೆಯೇ ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ 1.05 ಲಕ್ಷ ಹೆಕ್ಟೇರ್ ನಲ್ಲಿ ಬೆಳೆಹಾನಿಯಾಗಿದ್ದು, ಮೂರ್ನಾಲ್ಕು ದಿನಗಳಲ್ಲಿ ವಿಮೆ ಪರಿಹಾರ ರೈತರ ಖಾತೆಗೆ ಜಮಾ ಆಗಲಿದೆ. ಜಿಲ್ಲೆಯಲ್ಲಿ 3.08 ಲಕ್ಷ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದು, ಅವರಲ್ಲಿ 1.36 ಲಕ್ಷ ರೈತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಮತ್ತೊಂದು ಬಾರಿ ಮಳೆಯಾಗಿದ್ದರಿಂದ ಮತ್ತೊಮ್ಮೆ ಹಾನಿಗೀಡಾದ ಪ್ರದೇಶಗಳ ಜಂಟಿ ಸರ್ವೆ ನಡೆಯಲಿದೆ ಎಂದರು.

ಮಳೆಯಿಂದ ಹದಗೆಟ್ಟ ರಸ್ತೆಗಳ ದುರಸ್ತಿಗಾಗಿ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ₹ 40 ಕೋಟಿ ಹಣ ಲಭ್ಯವಿದೆ. ನಗರದ ರಸ್ತೆಗಳ ಆಡಿಟ್ ಮಾಡಿಸಿ ಬಳಿಕ ಅವುಗಳ ಅಭಿವೃದ್ಧಿ ‌ಮಾಡಲಾಗುವುದು. ಇದಕ್ಕೆ ಪ್ರತಿ ವಲಯಕ್ಕೆ ₹ 8 ಲಕ್ಷ ಖರ್ಚು ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನಪರಿಷತ್ ಸದಸ್ಯ ತತಿಪ್ಪಣ್ಣಪ್ಪ ಕಮಕನೂರ ಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.