ಕಲಬುರಗಿ: ‘ಕಲಬುರಗಿ ನಗರಕ್ಕೆ 24x7 ಕುಡಿಯುವ ನೀರು ಒದಗಿಸುವ ಯೋಜನೆಯನ್ನು ನಿಗದಿಪಡಿಸಿದ ಪರಿಷ್ಕೃತ ಕಾಲಮಿತಿಯೊಳಗೆ ಎಲ್ ಅಂಡ್ ಟಿ ಕಂಪನಿಯವರು ಪೂರ್ಣಗೊಳಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರು.
ನಿರಂತರ ನೀರು ಸರಬರಾಜು ಯೋಜನೆ ಅನುಷ್ಠಾನ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ ಅಂಡ್ ಟಿ ಕಂಪನಿಯ ಅಧಿಕಾರಿಗಳೊಂದಿಗೆ ಸಚಿವರು ಬೆಂಗಳೂರಿನಲ್ಲಿ ಸಭೆ ನಡೆಸಿ ಚರ್ಚಿಸಿದರು.
‘ಇದು ಕಲಬುರಗಿ ನಗರದ ನಾಗರಿಕರಿಗೆ ಸಂಬಂಧಿಸಿದ ಅತಿ ಪ್ರಮುಖ ಯೋಜನೆ. ಯೋಜನೆ ಜಾರಿಯಲ್ಲಿ ಪ್ರಸ್ತುತ ನಡೆಯುತ್ತಿರುವ ಕಾಮಗಾರಿ ತೃಪ್ತಿ ತಂದಿಲ್ಲ’ ಎಂದು ಎಲ್ ಅಂಡ್ ಟಿ ಕಂಪನಿ ಅಧಿಕಾರಿಗಳ ಬಳಿ ಅಸಮಾಧಾನ ವ್ಯಕ್ತಪಡಿಸಿದರು.
‘ಯೋಜನೆ ಅನುಷ್ಠಾನದ ಕಾಲಮಿತಿ ಕುರಿತಂತೆ ಯಾವುದೇ ರಿಯಾಯಿತಿ ನೀಡಲಾಗುವುದಿಲ್ಲ. ಎಲ್ ಅಂಡ್ ಟಿ ಕಂಪನಿಗೆ ನಿಗದಿಪಡಿಸಿದ ಪರಿಷ್ಕೃತ ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳಿಸಬೇಕು. ಒಂದು ವೇಳೆ ವಿಫಲವಾದರೆ ಗುತ್ತಿಗೆಯನ್ನು ರದ್ದುಗೊಳಿಸಿ ಬೇರೆ ಏಜೆನ್ಸಿಗೆ ಕೊಡಲಾಗುವುದು. ಕಾಲಮಿತಿಯೊಳಗೆ ಮುಗಿಸುವ ಉದ್ದೇಶದ ಸಾರ್ವಜನಿಕರ ಅತ್ಯಗತ್ಯ ಸೇವೆಗಳಲ್ಲಿ ಯಾವುದೇ ರಾಜಿ ಇಲ್ಲ’ ಎಂದರು.
ಯೋಜನೆಯ ಪ್ರಗತಿ ಪರಿಶೀಲಿಸಿ ತಂಡದ ಅಧಿಕಾರಿಗಳು ಒದಗಿಸಿದ ಮಾಹಿತಿಯನ್ನು ಪರಿಶೀಲಿಸಿದ ನಂತರ ಸಚಿವರು ಯೋಜನೆ ಪೂರ್ಣಗೊಳಿಸಲು ಸಮಯ ನಿಗದಿಪಡಿಸುವುದರ ಜೊತೆಗೆ ಕಂಪನಿಗೆ ಕೆಲ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.