
ಕಲಬುರಗಿ: ಜಿಲ್ಲೆಯಲ್ಲಿ ಜಾನುವಾರುಗಳಿಗೆ ಭಯಾನಕವಾಗಿ ಕಾಡುವ ಕಾಲುಬಾಯಿ ರೋಗದ ಲಸಿಕಾಕರಣದಲ್ಲಿ ಶೇ 96ರಷ್ಟು ಪ್ರಗತಿ ಸಾಧಿಸಿರುವ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ‘ಇದು ನಮ್ಮ ನೈಜ ಗೋರಕ್ಷಣೆ, ಬೂಟಾಟಿಕೆಯ ಗೋರಕ್ಷಣೆಯಲ್ಲ’ ಎಂದು ಎಕ್ಸ್ ಖಾತೆಯಲ್ಲಿ ಟಾಂಗ್ ನೀಡಿದ್ದಾರೆ.
‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ‘ಕಾಲುಬಾಯಿ ಲಸಿಕೆ; ಶೇ 96 ಗುರಿ ಸಾಧನೆ’ ವಿಶೇಷ ವರದಿಯನ್ನು ಹಂಚಿಕೊಂಡಿರುವ ಸಚಿವರು, ‘ರೈತಾಪಿ ವರ್ಗದ ಜೀವನಾಡಿಯಾಗಿರುವ ಜಾನುವಾರುಗಳನ್ನು ರಕ್ಷಿಸಿದರೆ ರೈತರನ್ನು ರಕ್ಷಿಸಿದಂತೆ. ಈ ಪ್ರಜ್ಞೆಯೊಂದಿಗೆ ನಮ್ಮ ಸರ್ಕಾರ ಕೆಲಸ ಮಾಡುತ್ತದೆಯೇ ಹೊರತು ರಾಜಕೀಯ ಹಿತರಕ್ಷಣೆಗಾಗಿ ಬೂಟಾಟಿಕೆಯ ಗೋರಕ್ಷಣೆ ನಮ್ಮದಲ್ಲ’ ಎಂದು ಬರೆದುಕೊಂಡಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗದ ಲಸಿಕಾಕರಣದಲ್ಲಿ ಶೇ 96ರಷ್ಟು ಪ್ರಗತಿ ಸಾಧಿಸುವ ಮೂಲಕ ಜಾನುವಾರುಗಳ ರಕ್ಷಣೆಯಲ್ಲಿ ಮಹತ್ವದ ಹೆಜ್ಜೆಯನ್ನು ಇಡಲಾಗಿದೆ.
ಜಿಲ್ಲೆಯಲ್ಲಿನ ಒಟ್ಟು 3,55,653 ಜಾನುವಾರುಗಳ ಪೈಕಿ 3,41,136 ಜಾನುವಾರುಗಳಿಗೆ ಕಾಲುಬಾಯಿ ರೋಗದ ಲಸಿಕೆ ನೀಡಲಾಗಿದೆ. ಗರ್ಭ ಕಟ್ಟಿದ ಮತ್ತು ಇತರ ರೋಗಗಳಿರುವ ಜಾನುವಾರುಗಳಿಗೆ ಲಸಿಕೆ ಹಾಕುವಂತಿಲ್ಲ, ಈ ಕಾರಣಕ್ಕಾಗಿ 14,500 ಜಾನುವಾರುಗಳು ಲಸಿಕಾಕರಣದಿಂದ ಹೊರಗುಳಿದಿವೆ.
ಪಶುವೈದ್ಯಕೀಯ ಸಿಬ್ಬಂದಿ ಪ್ರತಿ ಹಳ್ಳಿಗಳಿಗೂ ತೆರಳಿ, ರೈತರಲ್ಲಿ ಜಾಗೃತಿ ಮೂಡಿಸಿದ್ದರ ಪರಿಣಾಮ ಈ ಪ್ರಮಾಣದ ಯಶಸ್ಸು ಸಾಧ್ಯವಾಗಿದೆ ಎಂದಿದ್ದಾರೆ.
‘ರೈತಾಪಿ ವರ್ಗದ ಜೀವನಾಡಿಯಾಗಿರುವ ಜಾನುವಾರುಗಳನ್ನು ರಕ್ಷಿಸಿದರೆ ರೈತರನ್ನು ರಕ್ಷಿಸಿದಂತೆ, ಈ ಪ್ರಜ್ಞೆಯೊಂದಿಗೆ ನಮ್ಮ ಸರ್ಕಾರ ಕೆಲಸ ಮಾಡುತ್ತದೆಯೇ ಹೊರತು ರಾಜಕೀಯ ಹಿತರಕ್ಷಣೆಗಾಗಿ ಬೂಟಾಟಿಕೆಯ ಗೋರಕ್ಷಣೆ ನಮ್ಮದಲ್ಲ’ ಎಂದು ಕುಟುಕಿದ್ದಾರೆ.
‘2022ಕ್ಕೂ ಮೊದಲು ರಾಜ್ಯದಲ್ಲಿ ಕಾಲುಬಾಯಿ ರೋಗದ ಲಸಿಕೆಯ ತೀವ್ರ ಕೊರತೆ ದಾಖಲಾಗಿತ್ತು. ಕಾಲುಬಾಯಿ ರೋಗಕ್ಕೆ ರಾಜ್ಯದ ಜಾನುವಾರುಗಳ ಸಾವು ತೀವ್ರ ಏರಿಕೆ ಕಂಡಿತ್ತು ಎಂಬ ಸಂಗತಿ ಈಗ ಇತಿಹಾಸ’ ಎಂದು ಸಚಿವರು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.