ADVERTISEMENT

ನರೇಗಾ ಕಲಸದ ಸಮಯ ಬದಲಾಯಿಸಿ

ಆಳಂದ; ತಾ.ಪಂ ಕಚೇರಿ ಮುಂದೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2022, 5:11 IST
Last Updated 22 ಏಪ್ರಿಲ್ 2022, 5:11 IST
ಆಳಂದ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಪ್ರತಿಭಟನೆ ಜರುಗಿತು. ಕೆ.ನೀಲಾ, ಡಾ.ಪ್ರಭು ಖಾನಾಪುರೆ, ಸುಧಾಮ ಧನ್ನಿ ಇದ್ದರು
ಆಳಂದ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಪ್ರತಿಭಟನೆ ಜರುಗಿತು. ಕೆ.ನೀಲಾ, ಡಾ.ಪ್ರಭು ಖಾನಾಪುರೆ, ಸುಧಾಮ ಧನ್ನಿ ಇದ್ದರು   

ಆಳಂದ: ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಬುಧವಾರ ಸಿಪಿಐ(ಎಂ), ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ್ಮಿಕರ ಸಂಘ ಹಾಗೂ ದಲಿತ ಹಕ್ಕುಗಳ ಸಮಿತಿ ಸಹಯೋಗದಲ್ಲಿ ನರೇಗಾ ಕಾಮಗಾರಿ ಸಮಯ ಬದಲಾವಣೆ ಮಾಡಲು ಒತ್ತಾಯಿಸಿ ಪ್ರತಿಭಟನೆ ನಡೆಯಿತು.

ವಿವಿಧ ಗ್ರಾಮಗಳಿಂದ ಆಗಮಿಸಿದ ಕೂಲಿಕಾರ್ಮಿಕರುಪಟ್ಟಣದ ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಹೋರಾಟಗಾರ್ತಿ ಕೆ.ನೀಲಾ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲು ತೀವ್ರವಾಗಿದೆ. ಬೆಳಗ್ಗೆ 7ರಿಂದ 11 ರವರೆಗೆ ನರೇಗಾ ಕೆಲಸದ ಅವಧಿ ನಿಗದಿಗೊಳಿಸಿ ಹಾಜರಿ ಪಡೆಯಬೇಕು, ಬಿಸಿಲಿನಲ್ಲಿ ಮಹಿಳೆಯರು, ಹಿರಿಯರು ಕೆಲಸ ಮಾಡಲು ಕಷ್ಟವಾಗುತ್ತಿದೆ. ಕಾಮಗಾರಿ ಸ್ಥಳದಲ್ಲಿ ಅಗತ್ಯ ಸೌಲಭ್ಯ ಒದಗಿಸಿ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಕಾಮಗಾರಿ ಆರಂಭಿಸಬೇಕು ಎಂದು ಅಗ್ರಹಿಸಿದರು.

ADVERTISEMENT

ದಲಿತ ಹಕ್ಕುಗಳ ಸಮಿತಿ ಸಂಚಾಲಕ ಸುಧಾಮ ಧನ್ನಿ ಮಾತನಾಡಿ, ನರೇಗಾ ಯೋಜನೆಯಡಿ ಎನ್‌ಎಂಎಂಎಸ್ ಆ್ಯಪ್ ರದ್ದುಗೊಳಿಸಬೇಕು, ಪ್ರತಿ ಕುಟುಂಬಕ್ಕೂ ಎರಡು ನೂರು ದಿನ ಕೆಲಸ ನೀಡಬೇಕು, ಉದ್ಯೋಗ ಖಾತ್ರಿ ಕಾಮಗಾರಿಯಲ್ಲಿನ ಅವ್ಯವಹಾರ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಾಹಿತಿ ಡಾ.ಪ್ರಭು ಖಾನಾಪುರೆ, ಪಾಂಡುರಂಗ ಮಾವಿನಕರ್, ಪೈಯಾಜ್ ಹೆಬಳಿ, ಸುಮಂಗಲಾ ಜಿಡಗಾ, ರಮೇಶ ಪವಾರ, ಶಶಿಕಲಾ ಪಾಟೀಲ, ಮಲ್ಲಮ್ಮ, ಇಂದುಮತಿ, ರೂಪಾದೇವಿ, ಖಾದರ್ ಮುರಮಕರ್ ಇದ್ದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಸಂಜಯ ರೆಡ್ಡಿ ಮನವಿ ಸ್ವೀಕರಿಸಿ ಸಮಯ ಬದಲಾವಣೆ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಮನಕ್ಕೆ ತರುವ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.