ADVERTISEMENT

ಪಿಎಸ್ಐ ನೇಮಕಾತಿ ಅಕ್ರಮ:  ಕಾಟೇಗಾಂವಗೆ ಜಾಮೀನು, ರಾಜೇಶ್ ಹಾಗರಗಿ ಅರ್ಜಿ ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 12:51 IST
Last Updated 22 ಜೂನ್ 2022, 12:51 IST
ಸುರೇಶ‌ ಕಾಟೇಗಾಂವ
ಸುರೇಶ‌ ಕಾಟೇಗಾಂವ   

ಕಲಬುರಗಿ: ಪಿಎಸ್ಐ ಅಕ್ರಮ ನೇಮಕಾತಿ ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ ಬಂಧಿತರಾಗಿರುವ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ದಿವ್ಯಾ ಹಾಗರಗಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ಬಂಧಿತನಾಗಿದ್ದ ಮಹಾರಾಷ್ಟ್ರದ ಸುರೇಶ ಕಾಟೇಗಾಂವಗೆ ಹೈಕೋರ್ಟ್ ಕಲಬುರಗಿ ಪೀಠ ಜಾಮೀನು ಮಂಜೂರು ಮಾಡಿದೆ.

ದಿವ್ಯಾ ಪತಿ, ಜ್ಞಾನಜ್ಯೋತಿ ಶಿಕ್ಷಣ ‌ಸಂಸ್ಥೆಯ ಅಧ್ಯಕ್ಷ ರಾಜೇಶ್ ಜಾಗರಗಿ ಜಾಮೀನು ಅರ್ಜಿಯನ್ನು ‌ತಿರಸ್ಕರಿಸಿದೆ.

ಬುಧವಾರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ‌ನ್ಯಾಯಪೀಠವು ಸುರೇಶಗೆ ಜಾಮೀನು ನೀಡಿದೆ. ಆದರೆ, ರಾಜೇಶ್ ಅಕ್ರಮ ನಡೆದ ಪರೀಕ್ಷಾ ಕೇಂದ್ರವಿದ್ದ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿದ್ದರಿಂದ ಅವರಿಗೆ ಜಾಮೀನು ನೀಡುವುದು ಸೂಕ್ತವಲ್ಲ ಎಂದು ಸಿಐಡಿ ಪರವಾಗಿ ‌ಹಾಜರಾಗಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ‌ಅಭಿಯೋಜಕ ಪ್ರಕಾಶ ಎಲಿ ಅವರು ವಾದ ಮಂಡಿಸಿದರು.

ADVERTISEMENT

ಇದನ್ನು ಪುರಸ್ಕರಿಸಿದ ನ್ಯಾಯಪೀಠ ರಾಜೇಶ್ ಅರ್ಜಿಯನ್ನು ವಜಾ ಮಾಡಿತು.

ಕೆಲ ದಿನಗಳ ಹಿಂದೆ ಸುರೇಶ ಕಾಟೇಗಾಂವ ಹಾಗೂ ‌ರಾಜೇಶ್ ಹಾಗರಗಿ ಜಾಮೀನಿಗಾಗಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಇಬ್ಬರ ಅರ್ಜಿಯನ್ನೂ ತಿರಸ್ಕರಿಸಿದ್ದರಿಂದ ಮೊರೆ ಹೋಗಿದ್ದರು.

ಪ್ರಕರಣದಲ್ಲಿ ಬಂಧಿತ ಆರೋಪಿಗಳ ಪೈಕಿ ಸುರೇಶ ಕಾಟೇಗಾಂವಗೆ ಮೊದಲ ಜಾಮೀನು ಸಿಕ್ಕಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.