ADVERTISEMENT

ಸೂರ್ಯನೂರಿನಲ್ಲಿ ಸೂರ್ಯ ಕಾಣಲಿಲ್ಲ...

ಜಿಲ್ಲೆಯಲ್ಲಿ ಮೂರನೇ ದಿನವೂ ಸತತ ಮಳೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 19:55 IST
Last Updated 3 ಆಗಸ್ಟ್ 2019, 19:55 IST
ಕಲಬುರ್ಗಿಯಲ್ಲಿ ಶನಿವಾರ ಸುರಿದ ಮಳೆಯಲ್ಲಿ ಯುವಕ ಹಾಗೂ ಯುವತಿ ಹೊರಟ ನೋಟ
ಕಲಬುರ್ಗಿಯಲ್ಲಿ ಶನಿವಾರ ಸುರಿದ ಮಳೆಯಲ್ಲಿ ಯುವಕ ಹಾಗೂ ಯುವತಿ ಹೊರಟ ನೋಟ   

ಕಲಬುರ್ಗಿ: ಈ ಬೇಸಿಗೆಯಲ್ಲಿ 46 ಡಿಗ್ರಿ ಸೆಲ್ಸಿಯಸ್‌ಗೆ ಏರುವ ಮೂಲಕ ಜಿಲ್ಲೆಯ ಜನರ ಮುಖದಲ್ಲಿ ಬೆವರು ಬರಿಸಿದ್ದ ಸೂರ್ಯ ಶನಿವಾರ ಪತ್ತೆಯೇ ಇರಲಿಲ್ಲ. ಸತತ ಮೂರನೇ ದಿನವೂ ಮಳೆ ಸುರಿದಿದ್ದು, ಹಳೆ ಬಡಾವಣೆಗಳಲ್ಲಿನ ಮನೆಗಳು ಶಿಥಿಲಗೊಂಡು ಸೋರುತ್ತಿವೆ.

ಶನಿವಾರ ಜಿಲ್ಲೆಯಲ್ಲಿ 23 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಹೀಗಾಗಿ, ಇಡೀ ದಿನ ಚಳಿಯ ವಾತಾವರಣದಿಂದ ಜನರು ಮನೆಯಲ್ಲೇ ಉಳಿದು ಮಳೆಯ ಸುಖ ಅನುಭವಿಸಿದರು.

ನಗರ ಅಷ್ಟೇ ಅಲ್ಲದೇ ಜಿಲ್ಲೆಯ ಚಿಂಚೋಳಿ, ಕಮಲಾಪುರ, ಚಿತ್ತಾಪುರ, ವಾಡಿ, ಸೇಡಂನಲ್ಲಿ ಮಳೆ ಸುರಿಯಿತು. ನಗರದಲ್ಲಿ ಇಡೀ ದಿನ ಮೋಡ ಕವಿದ ವಾತಾವರಣವಿತ್ತು.

ADVERTISEMENT

ಕಳೆದ ಮೂರು ದಿನಗಳಲ್ಲಿ ಜಿಲ್ಲೆಯಾದ್ಯಂತ 91 ಮಿಲಿ ಮೀಟರ್ ಮಳೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 21 ಮಿಲಿ ಮೀಟರ್‌ ಮಳೆ ಸುರಿದಿದೆ. ವಾಡಿಕೆಯ ಮಳೆಗಿಂತ 16 ಮಿಲಿ ಮೀಟರ್‌ ಹೆಚ್ಚುವರಿ ಮಳೆ ಈ ಅವಧಿಯಲ್ಲಿ ಸುರಿದಂತಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಅಂಕಿ ಅಂಶಗಳು ಹೇಳುತ್ತವೆ.

ಅರೆ ಮಲೆನಾಡಿನ ವಾತಾವರಣ ಹೊಂದಿದ ಚಿಂಚೋಳಿ ತಾಲ್ಲೂಕಿನಲ್ಲಿ ಪ್ರಕೃತಿ ಕಳೆಗಟ್ಟಿದ್ದು, ಬೇಸಿಗೆಯಲ್ಲಿ ಬರಡಾಗಿದ್ದ ಕಾಡು ಹಸಿರು ಭೂರಮೆಯಿಂದ ಕಂಗೊಳಿಸುತ್ತಿದೆ. ಸಣ್ಣ ಪುಟ್ಟ ಜಲಪಾತಗಳು ತುಂಬಿ ಹರಿಯುತ್ತಿವೆ. ಚಂದ್ರಂಪಳ್ಳಿ ಅಣೆಕಟ್ಟೆಯಲ್ಲಿ ನೀರು ಸಂಗ್ರಹವಾಗುತ್ತಿದೆ.

ಎರಡು ವರ್ಷಗಳ ಸತತ ಬರಲಾಗದಿಂದ ಬಳಲಿದ್ದ ಜಿಲ್ಲೆಯ ಜನರಿಗೆ ಈ ಮಳೆ ತುಸು ಸಮಧಾನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.