ಅಫಜಲಪುರ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಗೊಬ್ಬೂರ (ಕೆ) ಹತ್ತಿರ ರಾಜ್ಯ ಹೆದ್ದಾರಿ–150ರಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆಗೆ ಕೆಕೆಆರ್ಟಿಸಿ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ತಂದೆ–ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಸೋಮಶೇಖರ ಭಾಸಗಿ (65) ಹಾಗೂ ಪ್ರಕಾಶ ಭಾಸಗಿ (28) ಮೃತರು. ದುರ್ಘಟನೆಯಲ್ಲಿ ರೂಪಾದೇವಿ ಸೋಮಶೇಖರ ಭಾಸಗಿ(55) ಗಂಭೀರವಾಗಿ ಗಾಯಗೊಂಡಿದ್ದು, ಕಲಬುರಗಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಗಲಕೋಟದಿಂದ ಕಲಬುರಗಿ ನಗರದ ರಾಣೇಶ ಪೀರ್ ದರ್ಗಾದಲ್ಲಿ ದೇವರ ದರ್ಶನ ಪಡೆದು ಮರಳಿ ಬಾಗಲಕೋಟೆಯತ್ತ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ವೃತ್ತಿಯಿಂದ ಎಂಜಿನಿಯರ್ ಆಗಿರುವ ಪ್ರಕಾಶ ಕಾರು ಓಡಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ, ಆಳಂದ ಡಿವೈಎಸ್ಪಿ ತಮ್ಮಾರಾಯ ಪಾಟೀಲ, ಸಿಪಿಐ ಚನ್ನಯ್ಯ ಹಿರೇಮಠ, ಪಿಎಸ್ಐ ಸಂಗೀತಾ ಶಿಂದೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.