ADVERTISEMENT

ಅಫಜಲಪುರ | ಕಾಮಗಾರಿ ಸ್ಥಗಿತ: ಸಾರ್ವಜನಿಕರ ಪರದಾಟ

ಶಿವಾನಂದ ಹಸರಗುಂಡಗಿ
Published 13 ಫೆಬ್ರುವರಿ 2024, 5:46 IST
Last Updated 13 ಫೆಬ್ರುವರಿ 2024, 5:46 IST
ಅಫಜಲಪುರ ಪಟ್ಟಣದ ಬಸವೇಶ್ವರ ವೃತ್ತ ದಲ್ಲಿ ರಸ್ತೆ ಅಗಲೀಕರಣ ಸ್ಥಗಿತವಾಗಿದ್ದರಿಂದ ವಾಹನಗಳು ಸಿಕ್ಕಾಕಿಕೊಂಡಿರುವುದು.
ಅಫಜಲಪುರ ಪಟ್ಟಣದ ಬಸವೇಶ್ವರ ವೃತ್ತ ದಲ್ಲಿ ರಸ್ತೆ ಅಗಲೀಕರಣ ಸ್ಥಗಿತವಾಗಿದ್ದರಿಂದ ವಾಹನಗಳು ಸಿಕ್ಕಾಕಿಕೊಂಡಿರುವುದು.   

ಅಫಜಲಪುರ: ಪಟ್ಟಣದ ಮುಖ್ಯರಸ್ತೆ ಅಗಲೀಕರಣಗೊಳಿಸಿ, ಎರಡು ಬದಿಯಲ್ಲಿ ಚರಂಡಿ ವ್ಯವಸ್ಥೆ ಮತ್ತು ವಿದ್ಯುತ್ ದೀಪ ಅಳವಡಿಕೆಗೆ 6 ತಿಂಗಳ ಹಿಂದೆಯೇ ಟೆಂಡರ್ ಕರೆದು ಕೆಲಸ ಆರಂಭಿಸಲಾಗಿತ್ತು. ಆದರೆ ಕಳೆದ 2 ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ಇದರಿಂದಾಗಿ ಜನರು ಮತ್ತು ವಾಹನ ಸವಾರರು ಪರದಾಡುವಂತಾಗಿದೆ.

ಪಟ್ಟಣದ ಬಸವೇಶ್ವರ ವೃತ್ತದಿಂದ ತಹಶೀಲ್ದಾರ್‌ ಕಚೇರಿವರೆಗೆ ರಸ್ತೆ ಅಗಲೀಕರಣಕ್ಕೆ₹ 2 ಕೋಟಿ ಟೆಂಡರ್ ಆಗಿದೆ. ಆದರೆ ಗುತ್ತಿಗೆದಾರರು ಕೇವಲ ಚರಂಡಿಗಳನ್ನು ಅಲ್ಪಸ್ವಲ್ಪ ಮಾಡಿ ಹೋಗಿಬಿಟ್ಟಿದ್ದಾರೆ. ಇನ್ನು ಕೆಲವು ಕಡೆ ಚರಂಡಿ ನಿರ್ಮಾಣ ಮಾಡಿ, ಅದರ ಮೇಲೆ ಚಾವಣಿ ಹಾಕಿಲ್ಲ. ಗುತ್ತಿಗೆದಾರರು ಆರಂಭದಲ್ಲಿ ಜೆಸಿಬಿ ಬಳಸಿ ಎಲ್ಲ ಅಂಗಡಿ ಮುಂಗಟ್ಟುಗಳ ಎದುರು ರಸ್ತೆಯನ್ನು ಅಗೆದಿದ್ದು, ಚರಂಡಿ ನಿರ್ಮಾಣವಾಗಿಲ್ಲ. ಈ ಮಧ್ಯೆಯೇ ಕಾಮಗಾರಿ ಸ್ಥಗಿತಗೊಂಡಿದೆ. ಹೀಗಾಗಿ ವ್ಯಾಪಾರಸ್ಥರಿಗೆ ತೊಂದರೆಯಾಗಿದೆ. ರಸ್ತೆ ಅಗಲೀಕರಣ ಮಾಡಲಾಗುವುದು ಎಂದು ಪುರಸಭೆಯವರು ಹೇಳುತ್ತಿದ್ದಾರೆ. ಆದರೆ ಮಾಡುತ್ತಿಲ್ಲ ಎಂದು ಸಾರ್ವಜನಿಕರ ಆರೋಪವಾಗಿದೆ.

6 ತಿಂಗಳ ಹಿಂದೆ ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಯಿತು. ಕೆಲಸ ಮಾತ್ರ ಪೂರ್ಣಗೊಳ್ಳಲಿಲ್ಲ. ಇದು ಕೇವಲ ಮಕ್ಕಳು ಆಟ ಆಡುವಂತೆ ಆಗಿದೆ ಎಂದು ಬೀದಿ ಬದಿ ವ್ಯಾಪಾರಸ್ಥ ಸುನಿಲ ಬಳ್ಳೂರಗಿ ಹೇಳಿದರು.

ADVERTISEMENT

ಅಗಲೀಕರಣ ಸಮಯದಲ್ಲಿ ಸಣ್ಣ ಪುಟ್ಟ ಶೆಡ್‌ಗಳನ್ನು ತೆಗೆದುಹಾಕಿದ್ದಾರೆ. ಇದರಿಂದ ಬೀದಿ ವ್ಯಾಪಾರಿಗಳಿಗೆ ತೊಂದರೆಯಾಗಿದೆ. ಇನ್ನು ಕೆಲವರು, ತಮ್ಮ ಶೆಡ್‌ಗಳನ್ನು ಮಾರಿಕೊಂಡು, ವ್ಯಾಪಾರಸ್ಥರು ಬೀದಿಪಾಲಾದರು. ಈ ಸಂಬಂಧ ಹಲವು ಸಂಘಟನೆಗಳು ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ.

ಕಾಮಗಾರಿ ಅಪೂರ್ಣವಾಗಿದ್ದರಿಂದ ಜನರಿಗೆ ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ದಿನಾಲು ಅಲ್ಲಲ್ಲಿ ವಾಹನಗಳು ಅಪಘಾತವಾಗುತ್ತಿವೆ. ದೇವಲ ಗಾಣಗಾಪುರ ದತ್ತ ಮಹಾರಾಜರ ದೇವಸ್ಥಾನಕ್ಕೆ ಮತ್ತು ಘತ್ತರಗಿ ಭಾಗ್ಯವಂತಿ ದೇವಸ್ಥಾನಕ್ಕೆ ದರ್ಶನಕ್ಕಾಗಿ ಸಾವಿರಾರು ಭಕ್ತರು ವಾಹನಗಳಲ್ಲಿ ಬರುತ್ತಾರೆ. ಮೂರು ಸಕ್ಕರೆ ಕಾರ್ಖಾನೆಗಳಿವೆ. ನಿತ್ಯ ಹೆಚ್ಚು ಭಾರ ಹೊತ್ತುಕೊಂಡು ವಾಹನಗಳು ಸಂಚರಿಸುತ್ತವೆ. ರಸ್ತೆ ಇಕ್ಕಟ್ಟಾಗಿದ್ದು, ವಾಹನ ದಟ್ಟನೆ ಸಾಮಾನ್ಯವಾಗಿದೆ ಎಂದು ತಾಲ್ಲೂಕು ಜೈ ಕರವೇ ಅಧ್ಯಕ್ಷ ಸುರೇಶ ಅವಟೆ ಹಾಗೂ ಜೆಡಿಎಸ್ ಮುಖಂಡ ರಾಜಕುಮಾರ ಬಬಲಾದ, ಹನುಮಂತರಾಯ ಬಿರಾದರ ಅಸಮಾಧಾನ ವ್ಯಕ್ತಪಡಿಸಿದರು.

ರಸ್ತೆ ಅಗಲೀಕರಣ ಕುರಿತು ಪುರಸಭೆ ಮುಖ್ಯಾಧಿಕಾರಿ ವಿಜಯಮಾಂತೇಶ ಹೂಗಾರ ಅವರು, ರಸ್ತೆ ಎರಡೂ ಬದಿಯಲ್ಲಿ ಮರಗಳಿದ್ದು, ಅವುಗಳು ಅರಣ್ಯ ಇಲಾಖೆಗೆ ಸೇರಿವೆ. ಅವರಿಗೆ ನಾವು ₹ 9 ಲಕ್ಷ ಕಟ್ಟಿದಾಗ ನಮಗೆ ಮರ ಕಡಿಯಲು ಅನುಮತಿ ನೀಡುತ್ತಾರೆ. ಅದಕ್ಕಾಗಿ ರಸ್ತೆ ಕಾಮಗಾರಿ ವಿಳಂಬವಾಗುತ್ತಿದೆ. ನಮ್ಮ ಹತ್ತಿರ ಸದ್ಯಕ್ಕೆ ಅಷ್ಟೊಂದು ಹಣವಿಲ್ಲ. ನಾವು ಕ್ರಿಯಾಯೋಜನೆಯಲ್ಲಿ ಹಣ ಇಟ್ಟಿದ್ದೇವೆ. ಅದು ಅನುಮೋದನೆಯಾದ ಮೇಲೆ ಹಣ ಕಟ್ಟುತ್ತೇವೆ. ರಸ್ತೆ ಬದಿಯಲ್ಲಿ ವಿದ್ಯುತ್ ಕಂಬಗಳಿದ್ದು, ಅವುಗಳನ್ನು ಸಹ ಸ್ಥಳಾಂತರಿಸಬೇಕಿದೆ ಎಂದು ಅವರು ತಿಳಿಸಿದರು.

ಪಟ್ಟಣದ ರಸ್ತೆ ಅಗಲೀಕರಣ ಕಾಮಗಾರಿ ಅಪೂರ್ಣವಾಗಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ತಕ್ಷಣ ಪುರಸಭೆಯವರು ಕೆಲಸ ಕಾಮಗಾರಿ ಪೂರ್ಣಗೊಳಿಸಬೇಕು
ಶೈಲೇಶ ಗುಣಾರಿ ಬಿಜೆಪಿ ಮಂಡಲ ಅಧ್ಯಕ್ಷ
ಪಟ್ಟಣದ ರಸ್ತೆ ಅಗಲೀಕರಣ ಕಾಮಗಾರಿ ಸ್ಥಗಿತವಾಗಿದ್ದು ಜನರಿಗೆ ತೊಂದರೆ ಆಗುತ್ತಿದೆ ಎಂಬುದು ನಮ್ಮ ಗಮನದಲ್ಲಿದೆ. ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಲಾಗುವುದು
ವಿಜಯಮಾಂತೇಶ ಹೂಗಾರ ಪುರಸಭೆ ಮುಖ್ಯಾಧಿಕಾರಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.