ADVERTISEMENT

ಅಫಜಲಪುರ: ಎಟಿಎಂನಿಂದ ₹14 ಲಕ್ಷ ಕಳವು

​ಪ್ರಜಾವಾಣಿ ವಾರ್ತೆ
Published 23 ಜುಲೈ 2023, 12:22 IST
Last Updated 23 ಜುಲೈ 2023, 12:22 IST
   

ಅಫಜಲಪುರ (ಕಲಬುರಗಿ ಜಿಲ್ಲೆ): ಪಟ್ಟಣದ ಕಾಳಿಕಾ ದೇವಸ್ಥಾನದ ಹತ್ತಿರವಿರುವ ಕೆನರಾ ಬ್ಯಾಂಕ್ ಎಟಿಎಂನಿಂದ ಭಾನುವಾರ ನಸುಕಿನ ಜಾವ ಕಳ್ಳತನವಾಗಿದೆ. ಕೇವಲ 9 ನಿಮಿಷಗಳಲ್ಲಿ ಕಳ್ಳರು ₹ 14.86 ಲಕ್ಷ ದೋಚಿ ಪರಾರಿಯಾಗಿದ್ದಾರೆ.

ಭಾನುವಾರ ನಸುಕಿನ ಜಾವ 3 ಗಂಟೆ 24 ನಿಮಿಷದ ವೇಳೆ ಎಟಿಎಂ ಕಳವು ಮಾಡಿದ್ದು ಸಿ.ಸಿ. ಟಿವಿಯಲ್ಲಿ ದಾಖಲಾಗಿದೆ. ಎಟಿಎಂನಲ್ಲಿ ಜುಲೈ 21ರಂದು ₹ 7,08,500 ಹಣ ಇತ್ತು. ಅವತ್ತೇ ಸಂಜೆ ₹ 10,00,500 ಬ್ಯಾಂಕ್‌ನವರು ಎಟಿಎಂಗೆ ಹಾಕಿದ್ದಾರೆ. ಒಟ್ಟು ₹ 17,08,500 ಎಟಿಎಂನಲ್ಲಿ ಇತ್ತು. ಕಳವು ಆಗುವುದಕ್ಕಿಂತ ಮೊದಲು ₹ 2,22,500 ಹಣವನ್ನು ಗ್ರಾಹಕರು ಡ್ರಾ ಮಾಡಿದ್ದಾರೆ. ಉಳಿದ 14.86 ಲಕ್ಷ ಹಣವನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಮುಖಕ್ಕೆ ಬಿಳಿ ಬಣ್ಣದ ಬಟ್ಟೆ ಧರಿಸಿದ್ದ ನಾಲ್ಕು ಜನ ಬೊಲೆರೊ ವಾಹನದಲ್ಲಿ ತೆರಳಿ ಹಣ ದೋಚಿದ್ದಾರೆ.

ಈ ಕುರಿತು ಪೊಲೀಸ್ ಠಾಣೆಗೆ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಹನುಮಂತರಾಯ ದೇಗಾಂವ್ ದೂರು ನೀಡಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂತ್‌ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್‌.ಎನ್‌. ಶ್ರೀನಿಧಿ, ಡಿವೈಎಸ್‌ಪಿ ಗೋಪಿ ಬಿ.ಆರ್, ಪಿಎಸ್‌ಐ ಭೀಮರಾಯ ಭಂಕಲಿ ಭೇಟಿ ನೀಡಿ ಕಳುವಾದ ಕುರುಹುಗಳನ್ನು ಪರಿಶೀಲನೆ ಮಾಡಿದರು. ಜೊತೆಗೆ ಕಲಬುರಗಿಯಿಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ADVERTISEMENT

ನಿರ್ಲಕ್ಷ್ಯ: ಎಟಿಎಂ ಭದ್ರತೆಗಾಗಿ ಬ್ಯಾಂಕ್‌ನ ಆಡಳಿತ ಮಂಡಳಿ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.