
ಕಲಬುರಗಿ ಚಿತ್ತಾಪುರದ ಬಜಾಜ್ ಕಲ್ಯಾಣ ಮಂಟಪದ ಪ್ರವೇಶ ದ್ವಾರದಲ್ಲಿ ಪೊಲೀಸರು ಪಟ್ಟಿಯಲ್ಲಿರುವ ಹೆಸರು ಪರಿಶೀಲನೆ ಮಾಡಿದರು
ಕಲಬುರಗಿ: ರಾಜ್ಯದ ಗಮನ ಸೆಳೆದಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಪಥಸಂಚಲನಕ್ಕೆ ಚಿತ್ತಾಪುರದಲ್ಲಿ ಕ್ಷಣಗಣನೆ ಆರಂಭವಾಗಿದೆ.
ಗಣವೇಷಧಾರಿಗಳ ಪಥಸಂಚಲನಕ್ಕೆ ಹೈಕೋರ್ಟ್ ಅಂಗಳದಲ್ಲಿ ಚಿತ್ತಾಪುರ ತಾಲ್ಲೂಕು ಆಡಳಿತ ನೀಡಿರುವ ಷರತ್ತು ಬದ್ಧ ಅನುಮತಿಯೊಂದಿಗೆ ಇಂದು (ಭಾನುವಾರ) ಮಧ್ಯಾಹ್ನ 3ರಿಂದ ಸಂಜೆ 5.30ರವರೆಗೆ ಆರ್ಎಸ್ಎಸ್ ಗಣವೇಷಧಾರಿಗಳ ಪಥಸಂಚಲನ ನಡೆಯಲಿದೆ. ಇದಕ್ಕಾಗಿ ಇಡೀ ಪಟ್ಟಣ ‘ಕೇಸರಿ’ಮಯವಾಗಿದೆ.
ಪಥಸಂಚಲನ ಶುರುವಾಗಿ, ಸಂಪನ್ನಗೊಳ್ಳುವ ಬಜಾಜ್ ಕಲ್ಯಾಣ ಮಂಟಪದತ್ತ ಚಿತ್ತಾಪುರ ಪಟ್ಟಣ ಹಾಗೂ ತಾಲ್ಲೂಕಿನ ವಿವಿಧೆಡೆಯ ಗಣವೇಷಧಾರಿಗಳು ಬೈಕ್, ಕಾರುಗಳಲ್ಲಿ ನಿಧಾನಕ್ಕೆ ಹೆಜ್ಜೆ ಹಾಕುತ್ತಿದ್ದಾರೆ. ಪಟ್ಟಣದ ಲಾಡ್ಜಿಂಗ್ ವೃತ್ತದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಿರುವ ಪೊಲೀಸರು, ಗಣವೇಷಧಾರಿಗಳು ಸೇರಿದಂತೆ ಎಲ್ಲ ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಪಟ್ಟಣದ ಹೊರಗಿನ ಜನರ ವಾಹನಗಳನ್ನು ಬಜಾಜ್ ಕಲ್ಯಾಣ ಮಂಟಪದ ಎದುರಿನ ರಸ್ತೆಯಿಂದ ಬೇರೆ ರಸ್ತೆಗೆ ಮಾರ್ಗ ಬದಲಾವಣೆ ಮಾಡುತ್ತಿದ್ದಾರೆ.
ಕಲ್ಯಾಣ ಮಂಟಪ ಪ್ರವೇಶ ದ್ವಾರದಲ್ಲಿ ಈ ಹಿಂದೆಯೇ ತಾಲ್ಲೂಕು ಆಡಳಿತಕ್ಕೆ ಆರ್ ಎಸ್ ಎಸ್ ನೀಡಿರುವ 300 ಜನರ ಪಟ್ಟಿಯನ್ನು ಹಿಡಿದು ನಿಂತಿದ್ದು, ಅದರಲ್ಲಿ ಹೆಸರ ಹೊಂದಿರುವ ಗಣವೇಷಧಾರಿಗಳನ್ನಷ್ಟೇ ಒಳಗೆ ಬಿಡುತ್ತಿದ್ದಾರೆ.
ಕೆಕೆಸಿಸಿಐ ಮಾಜಿ ಅಧ್ಯಕ್ಷ ಶಶಿಕಾಂತ ಪಾಟೀಲ ಸೇರಿದಂತೆ ಹಲವರು ಗಣವೇಷಧಾರಿಗಳು ಈಗಾಗಲೇ ಕಲ್ಯಾಣ ಮಂಟಪ ಪ್ರವೇಶಿಸಿದ್ದಾರೆ.
ಪಥಸಂಚಲನದ ಬಳಿಕ ವೇದಿಕೆ ಕಾರ್ಯಕ್ರಮಕ್ಕೆ ಬಜಾಜ್ ಕಲ್ಯಾಣ ಮಂಟಪದ ಆವರಣದಲ್ಲಿ ಕೊನೇ ಕ್ಷಣದ ಸಿದ್ಧತೆಗಳು ಭರದಿಂದ ಸಾಗಿವೆ. ವೇದಿಕೆಯಲ್ಲಿ ಮೂರು ಕುರ್ಚಿ ಹಾಕಿದ್ದು, ಕೆಳಗೆ ದಕ್ಷಿಣ ಭಾರತವನ್ನು ಚಿತ್ರಿಸಿ 'ಆರ್.ಎಸ್.ಎಸ್.100' ಎಂದು ಬರೆಯಲಾಗಿದೆ. ಮೆರವಣಿಗೆಯಲ್ಲಿ ಬಳಸುವ ವಾಹನವನ್ನು ಪುಷ್ಪಗಳಿಂದ ಸಿಂಗರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.