ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠ
ಕಲಬುರಗಿ: ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥ ಸಂಚಲನಕ್ಕೆ ನ.2ರಂದು ಅವಕಾಶ ನೀಡುವ ಕುರಿತ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠವು ಅ.28ರಂದು ಎಲ್ಲ ಸಂಘಟನೆಗಳೊಂದಿಗೆ ಶಾಂತಿ ಸಭೆಯನ್ನು ನಡೆಸಿ, ಅದರ ವರದಿಯನ್ನು ಅ.30ರಂದು ಸಲ್ಲಿಸಬೇಕು ಎಂದು ನಿರ್ದೇಶನ ನೀಡಿತು.
ನ್ಯಾಯಮೂರ್ತಿ ಎಂಜಿಎಸ್ ಕಮಲ ಅವರು ಅರ್ಜಿ ವಿಚಾರಣೆ ನಡೆಸಿದರು.
ಸರ್ಕಾರದ ಪರವಾಗಿ ಆನ್ಲೈನ್ ಮೂಲಕ ಹಾಜರಾದ ಅಡ್ವೊಕೇಟ್ ಜನರಲ್ ಶಶಿಕಿರಣ ಶೆಟ್ಟಿ ವಾದ ಮಂಡಿಸಿದರು. ಜಿಲ್ಲೆ ಹಾಗೂ ಚಿತ್ತಾಪುರದಲ್ಲಿ ಕಾನೂನು ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಈ ಅರ್ಜಿಗಳ ನಿರ್ಧರಿಸಲು ಇನ್ನೆರಡು ವಾರಗಳ ಕಾಲ ಸಮಯ ನೀಡಬೇಕು ಎಂದು ಕೋರಿದರು.
ಇದಕ್ಕೆ ಅರ್ಜಿದಾರರ ಪರ ವಕೀಲ ಅರುಣ ಶಾಮ್, ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಸಮಸ್ಯೆ ಹೇಳುತ್ತಾ ಕಾಲಹರಣ ಮಾಡುತ್ತಿದೆ. ಸಮಸ್ಯೆ ಎದುರಾದರೆ ಕೇಂದ್ರದ ಭದ್ರತಾ ಪಡೆಗಳ ನೆರವು ಪಡೆಯಲಿ ಎಂದು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಜಿ ಶಶಿಕಿರಣ ಶೆಟ್ಟಿ, ಈ ಅರ್ಜಿಯನ್ನು ಸರ್ಕಾರ ತಿರಸ್ಕರಿಸಿಲ್ಲ. ಬದಲಿಗೆ ಪರಿಶೀಲನೆ ನಡೆಸುತ್ತಿದೆ. ಇನ್ನಷ್ಟು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
'ಪ್ರಕರಣದ ಸೂಕ್ಷ್ಮತೆ ಕೋರ್ಟ್ ಗಮನಕ್ಕಿದೆ' ಎಂದ ನ್ಯಾಯಮೂರ್ತಿ ಎಂಜಿಎಸ್ ಕಮಲ, 'ಈ ಪ್ರಕರಣದಲ್ಲಿ ಶಾಂತಿಸ್ಥಾಪನೆ ನಿಟ್ಟಿನಲ್ಲಿ ಯಾವಾಗ ಸಭೆ ನಡೆಸುತ್ತೀರಿ' ಎಂದು ಪ್ರಶ್ನಿಸಿದರು. ಅದಕ್ಕೆ ಶಶಿಕಿರಣ ಶೆಟ್ಟಿ ಅವರು ಶೀಘ್ರವೇ ಸಭೆ ನಡೆಸಲಾಗುವುದು ಎಂದರು.
ಆಗ ಮಧ್ಯ ಪ್ರವೇಶಿಸಿದ ಕೋರ್ಟ್, ಅ.28ರಂದು ಜಿಲ್ಲಾ ಕೇಂದ್ರದಲ್ಲಿ ಎಲ್ಲ ಸಂಘಟನೆಗಳೊಂದಿಗೆ ಶಾಂತಿ ಸಭೆ ನಡೆಸಿ, ಅದರ ವರದಿಯನ್ನು ಅಕ್ಟೋಬರ್ 30ರಂದು ಸಲ್ಲಿಸಿ ಎಂದು ನಿರ್ದೇಶನ ನೀಡಿದರು.
ಅಲ್ಲದೇ 'ಈ ಪ್ರಕರಣವನ್ನು ಎಳೆಯುತ್ತಾ ಹೋಗಬೇಡಿ, ಆದಷ್ಟು ಶೀಘ್ರ ಇತ್ಯರ್ಥಕ್ಕೆ ಪ್ರಯತ್ನಿಸಿ' ಎಂದು ಸಲಹೆ ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.