ಕಲಬುರಗಿ: ‘ಶರವೇಗದಲ್ಲಿ ಬೆಳೆಯುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿದ್ದೀರಿ. ಇಂತಹ ವೈಜ್ಞಾನಿಕ ಯುಗದಲ್ಲಿ ವಿಜ್ಞಾನ ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆ, ಕಲ್ಪನೆ, ಆವಿಷ್ಕಾರ, ಸ್ಪರ್ಧೆಗಳಲ್ಲಿ ಕ್ರಿಯಾಶೀಲತೆಯಿಂದ ತೊಡಗಿಕೊಳ್ಳಬೇಕು’ ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎಸ್.ಜಿ. ಡೊಳ್ಳೇಗೌಡರ ಹೇಳಿದರು.
ನಗರದ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸೈನ್ಸ್ ಅಕಾಡೆಮಿ ಮತ್ತು ಬಿ.ಎಸ್ಸಿ ತೃತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ವಿದ್ಯಾರ್ಥಿ ಜೀವನದಲ್ಲಿ ಸಕಾರಾತ್ಮಕ ಚಿಂತನೆಗಳು, ಸಾಧಿಸುವ ಛಲವಿರಬೇಕು. ಅಂದಾಗ ಗುರಿ ಮುಟ್ಟಲು ಸುಲಭವಾಗುತ್ತದೆ’ ಎಂದು ತಿಳಿಸಿದರು.
ಶರಣಬಸವ ವಿವಿ ಡೀನ್ ಲಕ್ಷ್ಮಿ ಪಾಟೀಲ ಮಾಕಾ ಮಾತನಾಡಿ, ‘ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ನಿರಂತರ ಅಭ್ಯಾಸ, ಕಠಿಣ ಶ್ರಮ, ಸ್ಪರ್ಧಾತ್ಮಕ ಮನೋಭಾವನೆ, ಸಮಯಪ್ರಜ್ಞೆ ಬಹಳ ಮುಖ್ಯ. ಜೊತೆಗೆ ಬದುಕಿಗೆ ಬೇಕಾದ ಸಾಮಾಜಿಕ ಮೌಲ್ಯಗಳನ್ನು ಪ್ರತಿಯೊಬ್ಬರೂ ತಿಳಿದುಕೊಂಡಿರಬೇಕು’ ಎಂದರು.
ಪ್ರಾಚಾರ್ಯ ರಾಮಕೃಷ್ಣ ರೆಡ್ಡಿ ಮಾತನಾಡಿ, ‘ವಿಜ್ಞಾನದ ವಿದ್ಯಾರ್ಥಿಗಳಲ್ಲಿ ಸೃಜನಶೀಲ ಗುಣ, ನಿರಂತರ ಪ್ರಯತ್ನ ಇರಬೇಕು. ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆಯಾಗಬೇಕು’ ಎಂದು ತಿಳಿಸಿದರು.
ಬಸವರಾಜ ಬೀಳಗಿ 2024–25ನೇ ಸಾಲಿನ ಶೈಕ್ಷಣಿಕ ವರದಿ ವಾಚನ ಮಾಡಿದರು. ಕ್ರೀಡೆ, ಎನ್ಎಸ್ಎಸ್, ಎನ್ಸಿಸಿ, ಕೆ–ಸೆಟ್ ಪರೀಕ್ಷೆ, ಸಂಗೀತ, ನೃತ್ಯ, ಚಿತ್ರಕಲೆ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಹಣ, ಪ್ರಶಸ್ತಿ ವಿತರಿಸಲಾಯಿತು.
ಓಂಪ್ರಕಾಶ್, ಪ್ರದೀಪ್ ಉಪಸ್ಥಿತರಿದ್ದರು. ಸಿಂಧು, ವೈಷ್ಣವಿ ನಿರೂಪಿಸಿದರು. ಮಧುರಾ ಪ್ರಾರ್ಥನಾ ಗೀತೆ ಹಾಡಿದರು. ಲತಾದೇವಿ ಕರಿಕಲ್ ಸ್ವಾಗತಿಸಿದರು. ಬಸಮ್ಮ ಅತಿಥಿ ಪರಿಚಯ ಮಾಡಿದರು. ಶೈಲಾ ಹಿರೇಮಠ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.