ಪ್ರಾತಿನಿಧಿಕ ಚಿತ್ರ
ಕಲಬುರಗಿ: ಜಿಲ್ಲೆಯ ಆಳಂದ ತಾಲ್ಲೂಕಿನ ಖಜೂರಿ ಗ್ರಾಮ ವ್ಯಾಪ್ತಿಯ ತೊಗರಿ ರಾಶಿಯಾದ ಹೊಲದಲ್ಲಿ ಕುರಿ ಮೇಯಿಸುತ್ತಿದ್ದ ಕುರಿಗಾಹಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ವ್ಯಕ್ತಿಯನ್ನು ಆಳಂದ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಖಜೂರಿ ಗ್ರಾಮದ ಸುಧೀರ ವಾರಿಕ ಬಂಧಿತ ಆರೋಪಿ. ಮೂಲತಃ ವಿಜಯಪುರ ತಾಲ್ಲೂಕಿನ ಮಾನೆದದೊಡ್ಡಿ ನಿವಾಸಿಯಾದ ವಲಸೆ ಕುರಿಗಾಹಿ ಪಾಂಡು ಸುಳ್ಳೆ ಗಾಯಗೊಂಡವರು. ಪಾಂಡು ಸದ್ಯ ಕಲಬರುಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಡೆದ್ದೇನು?:
ಪಾಂಡು ಹಾಗೂ ಆತನ ಸಂಬಂಧಿ ಸಂತೋಷ ಮಾನೆ ಎಂಬಾತ ಮೂರು ತಿಂಗಳ ಹಿಂದೆ ತಮ್ಮೂರಿನಿಂದ ಕುರಿ ಮೇಯಿಸುತ್ತ ಊರೂರು ಸುತ್ತುತ್ತಿದ್ದರು. ಅದರಂತೆ ಫೆಬ್ರುವರಿ 9ರಂದು ಆಳಂದ ತಾಲ್ಲೂಕಿನ ಖಜೂರಿ ಗ್ರಾಮ ವ್ಯಾಪ್ತಿಯ ತೊಗರಿ ರಾಶಿ ಮಾಡಿದ ಹೊಲದಲ್ಲಿ ಪಾಂಡು ಕುರಿ ಮೇಯಿಸುತ್ತಿದ್ದರು. ಸಂತೋಷ ಪಕ್ಕದ ಹೊಲದಲ್ಲಿ ಕುರಿ ಬಿಟ್ಟಿದ್ದರು.
ಆಗ ಹೊಲದ ಮಾಲೀಕ ಸುಧೀರ ವಾರಿಕ ಬಂದು, ‘ಹೊಲದಲ್ಲಿ ಕುರಿಗಳನ್ನು ಯಾಕೆ ಬಿಟ್ಟಿದ್ದೀರಿ’ ಎಂದು ಪ್ರಶ್ನಿಸಿದರು. ‘ನೀವು ಎಷ್ಟು ಹೇಳಿದರೂ ಕೇಳಲ್ಲ’ ಎನ್ನುತ್ತ ಕೊಲೆ ಉದ್ದೇಶದಿಂದ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾರೆ ಎಂದು ಪಾಂಡು ದೂರಿನಲ್ಲಿ ತಿಳಿಸಿದ್ದಾರೆ.
ಎಸ್ಡಿಎಂಸಿ ಆಯ್ಕೆ ಸಭೆಯಲ್ಲಿ ಗಲಾಟೆ
ಕಲಬುರಗಿ: ನಗರದ ತಾಜ್ನಗರದ ಸರ್ಕಾರಿ ಉರ್ದು ಶಾಲೆಯಲ್ಲಿ ಎಸ್ಡಿಎಂಸಿ ರಚನೆ ಸಂದರ್ಭದಲ್ಲಿ ಸಭೆಗೆ ಸಾಕಷ್ಟು ಕೋರಂ ಇಲ್ಲದೇ ಸಭೆ ಮುಂದೂಡುವ ವಿಷಯದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ.
ಹಲ್ಲೆ ನಡೆಸಿ ಜೀವ ಬೆದರಿಕೆ ಆರೋಪದಡಿ ಶಂಶೋದ್ದಿನ್ ಮೊಹ್ಮದ್ ಅಯ್ಯೂಬ್ ಎಂಬುವರು ಶೇಖ್ ಸದ್ರುದ್ದಿನ್ ಸೇರಿ ಐವರ ವಿರುದ್ಧ ದೂರು ನೀಡಿದ್ದಾರೆ.
ಎಸ್ಡಿಎಂಸಿ ಆಯ್ಕೆ ಸಮಿತಿಯ ಸಭೆಯಲ್ಲಿ ಅನಧಿಕೃತವಾಗಿ ಪ್ರವೇಶಿಸಿ ಅಸಭ್ಯವಾಗಿ ವರ್ತಿಸಿದ ಆರೋಪದಡಿ ಶೇಖ್ ಸದ್ರುದ್ದೀನ್ ಗೋಲಾ ಎಂಬುವರು ಶಂಶೋದ್ದೀನ್ ಹಾಗೂ ಇತರ ಆರು ಮಂದಿ ವಿರುದ್ಧ ದೂರು ನೀಡಿದ್ದಾರೆ.
ಈ ಕುರಿತು ಪರಸ್ಪರ ವಿರುದ್ಧ ಚೌಕ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.