ADVERTISEMENT

ಯಡಿಯೂರಪ್ಪಗೆ ದಿವ್ಯ ಜ್ಞಾನ ಇದೆಯಾ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 17:57 IST
Last Updated 17 ಏಪ್ರಿಲ್ 2019, 17:57 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಕಲಬುರ್ಗಿ: ‘ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 22 ಹಾಗೂ ದೇಶದಲ್ಲಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ’ ಎಂಬ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ‘ಯಡಿಯೂರಪ್ಪಗೆ ದಿವ್ಯ ಜ್ಞಾನ ಇದೆಯಾ, ಇದೆ ಏನ್ರೀ’ ಎಂದು ಖಾರವಾಗಿ ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಯಡಿಯೂರಪ್ಪ ಬರೀ ಬುರುಡೆ ಬಿಡ್ತಾನೆ. ಈ ಹಿಂದೆ ಸರ್ಕಾರ ಬೀಳಿಸ್ತೀನಿ, ಬೀಳಿಸ್ತೀನಿ ಎಂದು ಹೇಳಿದ್ದ, ಬೀಳಿಸಿದನಾ’ ಎಂದು ಕೇಳಿದರು.

ಕೇಳಿದವರಿಗೇ ನಿಂಬೆಹಣ್ಣು: ‘ಗುಲಬರ್ಗಾ’ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪರ ಚುನಾವಣೆ ಪ್ರಚಾರಕ್ಕೆಂದು ಬುಧವಾರ ಹೆಲಿಕಾಪ್ಟರ್‌ನಲ್ಲಿ ನಗರಕ್ಕೆ ಬಂದಿಳಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೈಯಲ್ಲಿ ನಿಂಬೆಹಣ್ಣು ಹಿಡಿದುಕೊಂಡಿದ್ದರು.

ADVERTISEMENT

ಇದನ್ನು ಗಮನಿಸಿದ ಪತ್ರಕರ್ತರು, ‘ಏನ್ ಸರ್, ಕೈಯಲ್ಲಿ ನಿಂಬೆಹಣ್ಣು’ ಎಂದು ಕೇಳುತ್ತಿದ್ದಂತೆಯೇ, ಅದನ್ನು ಪಕ್ಕದಲ್ಲೇ ಇದ್ದ ಪತ್ರಕರ್ತರೊಬ್ಬರ ಜೇಬಿಗೆ ಹಾಕಿದರು. ಪತ್ರಕರ್ತ ನಿಂಬೆಹಣ್ಣನ್ನು ಅವರಿಗೇ ಕೊಡಲು ಮುಂದಾದರಾದರೂ, ‘ನೀನೆ ಇಟ್ಟುಕೊಳ್ಳಯ್ಯ’ ಎಂದವರು, ‘ಯಾರೋ ಕೊಟ್ಟರು. ಅದಕ್ಕೆ ಹಿಡಿದುಕೊಂಡಿದ್ದೆ ಅಷ್ಟೆ. ನನಗೆ ಇದರಲ್ಲೆಲ್ಲ ನಂಬಿಕೆ ಇಲ್ಲ’ ಎಂದು ನಗುತ್ತಲೇ ಸಮಜಾಯಿಷಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.