ಕಲಬುರಗಿ: ನಗರದ ವಿವಿಧೆಡೆಯ 13 ನ್ಯಾಯಬೆಲೆ ಅಂಗಡಿಗಳ ಮೇಲೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಭೀಮರಾಯ ಕಲ್ಲೂರು ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಮಿಲತ್ ನಗರ, ಗಂಜ್ ಪ್ರದೇಶ, ಆಳಂದ ಚೆಕ್ಪೋಸ್ಟ್ ಪ್ರದೇಶದ ಸೇರಿದಂತೆ ವಿವಿಧೆಡೆಯ ನ್ಯಾಯಬೆಲೆ ಅಂಗಡಿಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿದರು. ಪಡಿತರ ಆಹಾರ ಧಾನ್ಯ ವಿತರಣೆಯ ಕುರಿತು ಪರಿಶೀಲಿಸಿದರು.
‘ಸರ್ಕಾರ ನಿಗದಿಪಡಿಸಿದ ಪ್ರಮಾಣದಂತೆ ಪಡಿತರ ಚೀಟಿದಾರರಿಗೆ ಗುಣಮಟ್ಟದ ಆಹಾರ ಧಾನ ವಿತರಿಸಬೇಕು. ಬೆಳಿಗ್ಗೆ 8ರಿಂದ ಮಧ್ಯಾಹ್ನ 12 ಗಂಟೆವರೆಗೂ ಮತ್ತು ಸಂಜೆ 4ರಿಂದ ರಾತ್ರಿ 8 ಗಂಟೆವರೆಗೂ ತಪ್ಪದೆ ಆಹಾರ ಧಾನ್ಯ ವಿತರಣೆ ಮಾಡಬೇಕು. ಪಡಿತರ ವಿತರಿಸುವ ಪ್ರಮಾಣದ ಬಗ್ಗೆ ಫಲಾನುಭವಿಗಳಿಗೆ ಕಾಣುವಂತೆ ನ್ಯಾಯಬೆಲೆ ಅಂಗಡಿಯಲ್ಲಿ ಫಲಕಗಳನ್ನು ಪ್ರದರ್ಶಿಸಬೇಕು. ಅಂಗಡಿಯಲ್ಲಿ ಸ್ವಚ್ಛತೆ ಕಾಪಾಡಬೇಕು’ ಎಂದು ಸೂಚಿಸಿದರು.
‘ಭೇಟಿ ವೇಳೆ ಆಹಾರ ಧಾನ್ಯ ವಿತರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಭಿಪ್ರಾಯ ಪಡೆಯಲಾಯಿತು. ಈ ವೇಳೆ ಕೆಲವೆಡೆ ಪಡಿತರದೊಂದಿಗೆ ಸಾಬೂನು ಮತ್ತಿತರ ವಸ್ತುಗಳ ವಿತರಣೆ ಬಗೆಗೆ ಸಾರ್ವಜನಿಕರು ದೂರಿದ್ದಾರೆ’ ಎಂದು ಭೀಮರಾಯ ಕಲ್ಲೂರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.