ADVERTISEMENT

ಶಾಸಕ ಎಂ.ವೈ.ಪಾಟೀಲ ಮನೆ ಎದುರು ತಳವಾರ ಸಮುದಾಯದಿಂದ ಧರಣಿ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 7:01 IST
Last Updated 11 ನವೆಂಬರ್ 2025, 7:01 IST
ಕಲಬುರಗಿ ನಗರದ ಹೈಕೋರ್ಟ್‌ ಬಳಿ ತಮ್ಮ ಮನೆ ಎದುರು ನಡೆದ ಕರ್ನಾಟಕ ರಾಜ್ಯ ತಳವಾರ ಎಸ್ಟಿ ಹೋರಾಟ ಸಮಿತಿಯ ಧರಣಿ ಸತ್ಯಾಗ್ರಹದಲ್ಲಿ ಶಾಸಕ ಎಂ.ವೈ.ಪಾಟೀಲ ಮಾತನಾಡಿದರು        ಪ್ರಜಾವಾಣಿ ಚಿತ್ರ
ಕಲಬುರಗಿ ನಗರದ ಹೈಕೋರ್ಟ್‌ ಬಳಿ ತಮ್ಮ ಮನೆ ಎದುರು ನಡೆದ ಕರ್ನಾಟಕ ರಾಜ್ಯ ತಳವಾರ ಎಸ್ಟಿ ಹೋರಾಟ ಸಮಿತಿಯ ಧರಣಿ ಸತ್ಯಾಗ್ರಹದಲ್ಲಿ ಶಾಸಕ ಎಂ.ವೈ.ಪಾಟೀಲ ಮಾತನಾಡಿದರು        ಪ್ರಜಾವಾಣಿ ಚಿತ್ರ   

ಕಲಬುರಗಿ: ‘ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ತ್ವರಿತ ವಿತರಿಸಲು ಕ್ರಮವಹಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ತಳವಾರ ಎಸ್ಟಿ ಹೋರಾಟ ಸಮಿತಿಯಿಂದ ನಗರದ ಹೈಕೋರ್ಟ್‌ ಮುಂಭಾಗದ ಶಾಸಕ ಎಂ.ವೈ.ಪಾಟೀಲರ ಮನೆ ಎದುರು ಸೋಮವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಬೆಳಿಗ್ಗೆಯಿಂದ ಶುರುವಾದ ಧರಣಿ ಸಂಜೆ 5 ಗಂಟೆ ತನಕ ಸಾಗಿತು. ಸಮುದಾಯ ಮುಖಂಡರು ಪಕ್ಷಾತೀತವಾಗಿ ಧರಣಿಯಲ್ಲಿ ಪಾಲ್ಗೊಂಡು ಸರ್ಕಾರ, ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳನ್ನು ಹೊರತುಪಡಿಸಿ, ರಾಜ್ಯದ ಇತರ ಎಲ್ಲಾ ಜಿಲೆಗಳಲ್ಲಿ ತಳವಾರ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾಗಿದೆ. ಆದರೆ, ಈ ಎರಡು ಜಿಲ್ಲೆಗಳಲ್ಲಿ ಮಾತ್ರವೇ ತಳವಾರರಿಗೆ ಎಸ್ಟಿ ಪ್ರಮಾಣಪತ್ರ ಸಿಗುತ್ತಿಲ್ಲ. ನಮ್ಮ ಸಮುದಾಯಕ್ಕೆ ರಾಜಕೀಯ ಧ್ವನಿ ಇಲ್ಲ. ಇದರಿಂದ ನಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಮುಖಂಡ ಬಸವರಾಜ ಬೂದಿಹಾಳ ಮಾತನಾಡಿ, ‘ಶಾಸಕ ಎಂ.ವೈ.ಪಾಟೀಲರೇ ನೀವು ಹಿರಿಯರು. ನೀವು ಗುಡುಗಿದರೆ ಸಿದ್ದರಾಮಯ್ಯ ಅವರೇ ‌ನಡುಗುತ್ತಾರೆ. ಸರ್ಕಾರ ಹಾಗೂ‌ ಜಿಲ್ಲಾಡಳಿತ ಹೆದರಿ ಒಂದೇ ವಾರದಲ್ಲಿ ಈ ಸಮಸ್ಯೆ ‌ಪರಿಹಾರವಾಗುತ್ತದೆ. ನಮ್ಮೆಲ್ಲರ‌‌ ಪರವಾಗಿ ಮಲ್ಲಿಕಾರ್ಜುನ ‌ಖರ್ಗೆ, ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಸರ್ಕಾರಕ್ಕೆ ನಮ್ಮ ಸಮಸ್ಯೆ ಮನವರಿಕೆ ಮಾಡಿ, ಎಸ್ಟಿ ಪ್ರಮಾಣ ಪತ್ರ ವಿತರಣೆಗೆ ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.

ಮುಖಂಡ ಲಚ್ಚಪ್ಪ ಜಮಾದಾರ ಮಾತನಾಡಿ, ‘ಇತ್ತೀಚೆಗೆ ಯಾದಗಿರಿಗೆ ಬಂದಿದ್ದ ಸಚಿವ ಸತೀಶ ಜಾರಕಿಹೊಳಿ ತಳವಾರರಿಗೆ ಎಸ್ಟಿ ಪ್ರಮಾಣ ಪತ್ರ ವಿತರಿಸದಂತೆ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಸರ್ಕಾರದ ಪ್ರತಿನಿಧಿಯಾಗಿ ಒಂದು ಜಾತಿ ಟಾರ್ಗೆಟ್‌ ಮಾಡುವುದು ಖಂಡನೀಯ. ಪರಿಶಿಷ್ಟ ಪಂಗಡ ಇಲಾಖೆಯನ್ನೇ ಬೇಡ–ನಾಯಕ ಸಮಾಜದವರು ತಮ್ಮ ನಿಯಂತ್ರಣಕ್ಕೆ ಪಡೆದ್ದಾರೆ. ಬೇಡ–ನಾಯಕ ಸಮುದಾಯಗಳ ‌ಒತ್ತಡಕ್ಕೆ ಮುಖ್ಯಮಂತ್ರಿ ‌ಮಣಿದಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಾಜದ‌ ಮುಂಖಂಡ ವಿದ್ಯಾಧರ ಮಂಗಳೂರು ಮಾತನಾಡಿ, ‘ತಳವಾರರಿಗೆ ಎಸ್ಟಿ ಪ್ರಮಾಣಪತ್ರ ವಿತರಿಸಲು ಅಧಿಕಾರಿಗಳು ಸುತ್ತೋಲೆಗಳು, ಸರ್ಕಾರಿ ಆದೇಶಗಳ ನೆಪ ಹೇಳುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

ಮುಖಂಡ ಪ್ರಕಾಶ ಜಮಾದಾರ ಮಾತನಾಡಿ, ‘ಜಿಲ್ಲೆಯಲ್ಲಿ ಬಹುತೇಕ 15 ಸಾವಿರ ಮಂದಿಗೆ ಎಸ್ಟಿ ಪ್ರಮಾಣ ‌ಪತ್ರ‌ ಕೊಡಲಾಗಿದೆ. ಆದರೆ, ಅವರ ಮಕ್ಕಳಿಗೂ ಈಗ ಎಸ್ಟಿ ಪ್ರಮಾಣ ಪತ್ರ ಸಿಗುತ್ತಿಲ್ಲ. ಇದು ಗಂಭೀರ ಸಮಸ್ಯೆ’ ಎಂದರು.

‘ಇತ್ತೀಚೆಗೆ ಎಸ್ಟಿ ಮೀಸಲಾತಿ ಪ್ರಮಾಣ ಶೇ 7ಕ್ಕೆ ಹೆಚ್ಚಿಸಲಾಗಿದೆ. ಕೋಲಿ–ಕಬ್ಬಲಿಗ, ಕುರುಬರು, ತಳವಾರರಿಗೆ ಎಸ್ಟಿಗೆ ಸೇರಿಸದಂತೆ ಹಲವು ನಾಯಕರು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ನಮ್ಮ ಪ್ಲೇಟ್‌ನಲ್ಲಿರುವ ಊಟ ಕಸಿದಂತೆ ಹೇಳುತ್ತಿದ್ದಾರೆ. ಶೇ 7ರಷ್ಟು ಮೀಸಲಾತಿಯ ಸಂವಿಧಾನದತ್ತ ಸೌಲಭ್ಯ ಒಂದೇ ಸಮುದಾಯಕ್ಕೆ ಕೊಟ್ಟರೆ ಇನ್ನುಳಿದ ಸಮುದಾಯಗಳು ಎಲ್ಲಿ ಹೋಗಬೇಕು’ ಎಂದು ಪ್ರಶ್ನಿಸಿದರು.

ಧರಣಿಯಲ್ಲಿ ಕರ್ನಾಟಕ ರಾಜ್ಯ ತಳವಾರ ಸಮಾಜದ ರಾಜ್ಯಾಧ್ಯಕ್ಷ ಸರ್ದಾರ ರಾಯಪ್ಪ, ಮುಖಂಡ ಅವಣ್ಣ ಮ್ಯಾಕೇರಿ ಮಾತನಾಡಿದರು.

ತೊನಸನಳ್ಳಿ ಕೊತಲಪ್ಪ ಸ್ವಾಮೀಜಿ, ಚಿದಾನಂದ ಸ್ವಾಮೀಜಿ, ಹರಿಹರಾನಂದ ಸ್ವಾಮೀಜಿ, ಮುಖಂಡರಾದ ಸೈಬಣ್ಣ ನೀಲಪ್ಪಗೋಳ, ರೇವಣಸಿದ್ದಪ್ಪಗೌಡ ಎಂ. ಕಮಾನಮನಿ, ಬಸವರಾಜ ಸಪ್ಪನಗೋಳ, ರಮೇಶ ನಾಟಿಕರ, ಶಂಕು ಮ್ಯಾಗೇರಿ, ದಿಗಂಬರ ಡಾಂಗೆ, ಪ್ರೇಮ ಕೋಲಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

‘ನಿಮ್ಮ ಬೇಡಿಕೆಗೆ ನನ್ನ ಬೆಂಬಲ’

‘ನಿಮ್ಮ‌ ನ್ಯಾಯಯುತ‌ ಬೇಡಿಕೆಗೆ ನನ್ನ ಸಂಪೂರ್ಣ ಬೆಂಬಲವಿದ್ದು ಈ ಬೇಡಿಕೆ ಕುರಿತು 2024ರ ಡಿಸೆಂಬರ್‌ನಲ್ಲೇ ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದೆ’ ಎಂದು ಶಾಸಕ ಎಂ.ವೈ.ಪಾಟೀಲ ಹೇಳಿದರು.  ಧರಣಿ ನಿರತರ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

‘ಈ ಹಿಂದೆ ತಳವಾರರು ಎಸ್ಟಿಗೆ ಸೇರಿಸಿದಾಗ ನಮಗೂ ಖುಷಿಯಾಗಿತ್ತು. ನಂತರದಲ್ಲಿ ತಳವಾರ ಎಂಬ ಶಬ್ದ ಭೋವಿ ಸಮಾಜದ ಪರ್ಯಾಯ ಪದ ಎಂಬ ಪ್ರತಿಪಾದನೆಯಿಂದ ಈ ಗೊಂದಲ ಸೃಷ್ಟಿಯಾಯಿತು. ತಳವಾರ ಮಾತ್ರವಲ್ಲದೇ ಕೋಲಿ–ಕಬ್ಬಲಿಗ ಸಮುದಾಯಗಳ ಪರ್ಯಾಯ ಪದಗಳಿಗೂ ಎಸ್ಟಿ ಪ್ರಮಾಣಪತ್ರ ಕೊಡಬೇಕು ಎಂಬುದು ನನ್ನ ನಿಲುವು. ಈ ಸಮುದಾಯಗಳಿಗೆ ಎಸ್ಟಿ ಪ್ರಮಾಣ ಪತ್ರ ಕೊಡಿಸಲು ಯಾವ ಹಂತದಲ್ಲಿ ಪ್ರಯತ್ನಿಸಬೇಕೋ ‌ಅಲ್ಲಿ ಪ್ರಯತ್ನಿಸುವೆ. ಈ ಸಂಬಂಧ ಶೀಘ್ರವೇ ಉಸ್ತುವಾರಿ ‌ಸಚಿವರು ಮುಖ್ಯಮಂತ್ರಿ ‌ಅವರೊಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸುವೆ’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.