ADVERTISEMENT

ಎರಡು ಸ್ಥಾನಕ್ಕೆ ಇಬ್ಬರೇ ಸ್ಪರ್ಧಿಗಳು!

ಗೆದ್ದವರಿಗೆ ಮೀಸಲಾತಿ; ಸೋತವರಿಗೆ ಸಾಮಾನ್ಯ ಸ್ಥಾನ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 11:25 IST
Last Updated 22 ಡಿಸೆಂಬರ್ 2020, 11:25 IST
ಭಾವಸಿಂಗ್ ಗಂಗಾರಾಮ ಜಾಧವ ಮತ್ತು ವೆಂಕಟರಾವ್ ಚಂದ್ರು ಜಾಧವ
ಭಾವಸಿಂಗ್ ಗಂಗಾರಾಮ ಜಾಧವ ಮತ್ತು ವೆಂಕಟರಾವ್ ಚಂದ್ರು ಜಾಧವ   

ಚಿಂಚೋಳಿ: ತಾಲ್ಲೂಕಿನ ಗಡಿಲಿಂಗದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿವರಾಮ ನಾಯಕ ತಾಂಡಾ, ಅಣದುನಾಯಕ ತಾಂಡಾ ಮತ್ತು ಹೇಮಲಾನಾಯಕ ತಾಂಡಾ ಸೇರಿ ವಾರ್ಡ್‌-3ರ ಪರಿಶಿಷ್ಟ ಜಾತಿ ಕ್ಷೇತ್ರ ಹಾಗೂ ಸಾಮಾನ್ಯ ಕ್ಷೇತ್ರದ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯುತ್ತಿದೆ.

ಮೂರು ಸ್ಥಾನಗಳಲ್ಲಿ ಪರಿಶಿಷ್ಟ ಜಾತಿ ಮಹಿಳೆ ಕ್ಷೇತ್ರದಿಂದ ಮಂಜುಳಾ ನಾಮದೇವ ರಾಠೋಡ ಅವಿರೋಧ ಆಯ್ಕೆಯಾಗಿದ್ದಾರೆ. ಭಾವಸಿಂಗ್ ಗಂಗಾರಾಮ ಜಾಧವ ಮತ್ತು ವೆಂಕಟರಾವ್ ಚಂದ್ರು ಜಾಧವ ಇಬ್ಬರೂ ಪರಿಶಿಷ್ಟ ಜಾತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಸಾಮಾನ್ಯ ಕ್ಷೇತ್ರಕ್ಕೆ ಇಲ್ಲಿ ನಾಮಪತ್ರ ಬಾರದ ಹಿನ್ನೆಲೆಯಲ್ಲಿ ಚುನಾವಣೆ ಅನಿವಾರ್ಯವಾಗಿದೆ. ಗೆದ್ದವರು ಮೀಸಲಾತಿಯಿಂದ ಸದಸ್ಯರಾದರೆ, ಸೋತವರಿಗೆ ಸಾಮಾನ್ಯ ಕ್ಷೇತ್ರದ ಸ್ಥಾನ ಪಕ್ಕಾ ಆಗಲಿದೆ!

‘ಸದ್ಯ ಪರಿಶಿಷ್ಟ ಜಾತಿ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚುನಾವಣೆಯಲ್ಲಿ ಹೆಚ್ಚು ಮತ ಪಡೆದವರು ಪರಿಶಿಷ್ಟ ಜಾತಿ ಕ್ಷೇತ್ರದಿಂದ ಆಯ್ಕೆಯಾದರೆ, ಸೋತವರು ಸಾಮಾನ್ಯ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದ್ದಾರೆ’ ಎಂದು ಚುನಾವಣಾಧಿಕಾರಿ ಕಾಶಿರಾಯ ಮುಡುಬಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಗಡಿಲಿಂಗದಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅವಿರೋಧ ಆಯ್ಕೆಗೆ ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರೇಮಸಿಂಗ್ ಜಾಧವ ಹಾಗೂ ಮುಖಂಡ ಗೋರಂ ನಾಯಕ ಪ್ರಯತ್ನದಿಂದ ಈಗಾಗಲೇ ಇಬ್ಬರು ಸದಸ್ಯರು ಅವಿರೋಧ ಆಯ್ಕೆ ಆಗಿದ್ದಾರೆ. ಇನ್ನೂ ಇಬ್ಬರ ಆಯ್ಕೆಗೆ ತಾಂತ್ರಿಕವಾಗಿ ಮಾತ್ರ ಚುನಾವಣೆ ನಡೆಯಲಿದ್ದು, ಅಧಿಕೃತ ಪ್ರಕಟವಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.