
ಪ್ರಜಾವಾಣಿ ವಾರ್ತೆಅಖಿಲ ಭಾರತ ವೀರಶೈವ ಮಹಾಸಭಾ
ಕಲಬುರಗಿ: ‘ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ಸಮಿತಿಯ ಚುನಾವಣೆಗೆ ದಿನಾಂಕ ನಿಗದಿಪಡಿಸಲಾಗಿದೆ’ ಎಂದು ಉಪ ಚುನಾವಣಾ ಅಧಿಕಾರಿ ಎಸ್.ಎಂ. ಕಾಡಾದಿ ಹೇಳಿದರು.
'ಜೂನ್ 27ರಿಂದ ನಾಮಪತ್ರ ಸ್ವೀಕಾರ ಆರಂಭವಾಗಲಿದ್ದು, ಜುಲೈ 4 ಕೊನೆಯ ದಿನವಾಗಿದೆ. ಜುಲೈ 5ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಜು.8ರವರೆಗೆ ನಾಮಪತ್ರ ಹಿಂಪಡೆಯಬಹುದಾಗಿದೆ. ಜು.21ರ ಬೆಳಿಗ್ಗೆ 8ರಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದ್ದು, ಮತದಾನ ಮುಗಿದ ನಂತರ ಎಣಿಕೆ ನಡೆದು, ಫಲಿತಾಂಶ ಪ್ರಕಟವಾಗಲಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಜಿಲ್ಲೆಯಲ್ಲಿ ಮಹಾಸಭಾ ಜಿಲ್ಲಾ ಘಟಕದಲ್ಲಿ 6,673 ಸದಸ್ಯ ಮತದಾರರು ಇದ್ದಾರೆ. ಚುನಾವಣೆಯಲ್ಲಿ ಒಟ್ಟು 31 ಸದಸ್ಯರಿಗೆ ಸ್ಪರ್ಧಿಸಲು ಅವಕಾಶವಿದ್ದು, 20 ಜನ ಪುರುಷ ಹಾಗೂ 10 ಜನ ಮಹಿಳೆಯರು ಕಾರ್ಯಕಾರಣಿ ಸಮಿತಿಗೆ ಸ್ಪರ್ಧಿಸಬಹುದು’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾ ಮುಖಂಡರಾದ ಅಶೋಕ ದೇಸಾಯಿ, ಈಶ್ವರ ಪಾಟೀಲ ಉಪಸ್ಥಿತರಿದ್ದರು.