ಯಡ್ರಾಮಿ: ಜಾನಪದವು ಶಿಷ್ಟ ಸಾಹಿತ್ಯಕ್ಕೆ ತಾಯಿ ಬೇರು. ಯಡ್ರಾಮಿ ತಾಲ್ಲೂಕು ಪೌರಾಣಿಕ, ಐತಿಹಾಸಿಕ, ಸಾಹಿತ್ಯಕ, ಸಾಂಸ್ಕೃತಿಕವಾಗಿ ಶ್ರೀಮಂತ ಬೀಡಾಗಿದೆ. ಈ ಪಟ್ಟಣ ಸೇರಿದಂತೆ ಐತಿಹಾಸಿಕ ತಾಣಗಳಾದ ಕುಳಗೇರಿ, ಕಡಕೋಳ, ಕೊಂಡಗೂಳಿ ಗ್ರಾಮಗಳನ್ನು ಅಭಿವೃದ್ಧಿ ಮಾಡಬೇಕು ಎಂದು ಸಾಹಿತಿ, ಕವಿ ಎಲ್ಬಿಕೆ ಅಲ್ದಾಳ ಶನಿವಾರ ಇಲ್ಲಿ ಒತ್ತಾಯಿಸಿದರು.
ಕನ್ಯಾ ಪ್ರೌಢ ಶಾಲೆ ಆವರಣದಲ್ಲಿ ಶನಿವಾರ ಪ್ರಥಮ ತಾಲ್ಲೂಕು ಕನ್ನಡ ಜನಪದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನಪದದಲ್ಲಿ ದೇಸಿ ಸಂಸ್ಕೃತಿ ಇದೆ. ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿಯ ವೈವಿಧ್ಯತೆ ಇದೆ ಎಂದು ಹೇಳಿದರು.
ದೇವಪುರದ ಲಕ್ಷ್ಮೀಶ, ಕುಳಗೇರಿಯ ನಾಗಚಂದ್ರ, ಕೊಂಡ ಗೂಳಿ ಕೇಶಿರಾಜ, ತತ್ವಜ್ಞಾನಿ ಕಡಕೋಳದ ಮಡಿವಾಳಪ್ಪ, ಕೊಡೆಕಲ್ಲ ಬಸವಣ್ಣ, ದೇವರದಾಸಿಮಯ್ಯ ಸೇರಿದಂತೆ ಅನೇಕರು ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಯಡ್ರಾಮಿಯ ರಾಮತೀರ್ಥವನ್ನು ಜೀರ್ಣೋದ್ಧಾರ ಮಾಡಬೇಕು, ತಾಲ್ಲೂಕು ಕೇಂದ್ರದಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಿಸ ಬೇಕು, ಭಜನಾ ಮಂಡಳಿಗಳಿಗೆ ಸಂಗೀತ ಪರಿಕರ, ತಾಲ್ಲೂಕಿನ ಕಲಾವಿದರಿಗೆ ಮಾಸಾಶನ ನೀಡಬೇಕು. ಪ್ರತಿ ಶಾಲೆಗೆ ಸಂಗೀತ ಶಿಕ್ಷಕರನ್ನು ನೇಮಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ಸಮ್ಮೇಳನವನ್ನು ಸೊನ್ನ ವಿರಕ್ತ ಮಠದ ಡಾ.ಶಿವಾನಂದ ಸ್ವಾಮೀಜಿ ಉದ್ಘಾಟಿಸಿದರು. ಮೋರಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ, ಯಡ್ರಾಮಿ ವಿರಕ್ತ ಮಠದ ಸಿದ್ಧಲಿಂಗ ಸ್ವಾಮೀಜಿ, ಜನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಪೊಲೀಸ್ ಪಾಟೀಲ, ಜೇವರ್ಗಿ ಮಾಜಿ ಶಾಸಕ ದೊಡ್ಡಪ್ಪಗೌಡ ಮಾಲಿ ಪಾಟೀಲ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಸಾಹಿತಿ ಪ್ರಭಾಕರ ಸಾತಖೇಡ, ರೈತ ಮುಖಂಡ ಕೇದಾರಲಿಂಗಯ್ಯ ಹಿರೇಮಠ, ಅಶೋಕ ಸಾಹು ಗೋಗಿ, ದಂಡಪ್ಪ ಸಾಹು ಕುಳಗೇರಿ, ಉತ್ತರ ಕರ್ನಾಟಕ ಕರವೇ ಅಧ್ಯಕ್ಷ ಶರಣು ಗದ್ದುಗೆ, ರಮೇಶ ಕುಲಕರ್ಣಿ, ಮಲ್ಲನಗೌಡ ಪಾಟೀಲ, ಗಿರೀಶ ರಾಠೋಡ, ಆರ್.ಜಿ.ಪುರಾಣಿಕ್, ಬಸಟ್ಟೆಪ್ಪ ವಾರದ್, ಪ್ರಕಾಶ ಬೆಲ್ಲದ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.