ADVERTISEMENT

ಅಂಗವಿಕಲರ ಆಶಾಕಿರಣ

ಕೊಡಗು ವಿದ್ಯಾಲಯ ಅಪಾರಚ್ಯುನಿಟಿ ಶಾಲೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 8:05 IST
Last Updated 3 ಡಿಸೆಂಬರ್ 2013, 8:05 IST

ಮಡಿಕೇರಿ: ವಿಕಲಚೇತನ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಹಾಗೂ ಕ್ರೀಡಾಸಕ್ತಿ ಬೆಳೆಸುವ ನಿಟ್ಟಿನಲ್ಲಿ ಇಲ್ಲಿನ ಕೊಡಗು ವಿದ್ಯಾಲಯ ಅಪಾರಚ್ಯುನಿಟಿ ಶಾಲೆ ಗಮನಾರ್ಹ ಸಾಧನೆ ಮಾಡಿದೆ. ಈ ಮೂಲಕ ವಿಕಲಚೇತನ ಮಕ್ಕಳಲ್ಲಿ ಆಶಾಕಿರಣ ಮೂಡಿಸಿದೆ.

ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಲವು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವುದರ ಜೊತೆಗೆ ಅತ್ಯುತ್ತಮ ಕ್ರೀಡಾಪಟುಗಳಾಗಿಯೂ ಹೊರಹೊಮ್ಮಿದ್ದಾರೆ. ಪ್ರಸ್ತುತ (ನವೆಂಬರ್‌ 28–ಡಿಸೆಂಬರ್‌ 8) ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಏಷ್ಯಾ ಪೆಸಿಫಿಕ್‌ ಗೇಮ್ಸ್‌ ಟೂರ್ನಿಯಲ್ಲಿ ಶಾಲೆಯ ವಿದ್ಯಾರ್ಥಿಗಳಾದ ಕೆ.ಟಿ. ಪೊನ್ನಣ್ಣ ಹಾಗೂ ಮೈಕಲ್‌ ಅಂಟೋನಿ ಅವರು ಭಾಗವಹಿಸಿರುದು ಇದಕ್ಕೆ ಸಾಕ್ಷಿ.
ರಾಷ್ಟ್ರೀಯ ಬಾಸ್ಕೆಟ್‌ಬಾಲ್‌ ತಂಡದಲ್ಲಿ ಕೆ.ಟಿ. ಪೊನ್ನಣ್ಣ ಹಾಗೂ ರಾಷ್ಟ್ರೀಯ ಫುಟ್ಬಾಲ್‌ ತಂಡದಲ್ಲಿ ಮೈಕಲ್‌ ಅಂಟೋನಿ ಸ್ಥಾನ ಪಡೆಯುವ ಮೂಲಕ ಗಮನಾರ್ಹ ಸಾಧನೆ ತೋರಿದ್ದಾರೆ.

ಇಂತಹ ಕ್ರೀಡಾಪಟುಗಳನ್ನು ರೂಪಿಸಿರುವ ಕೊಡಗು ವಿದ್ಯಾಲಯ ಅಪಾರಚ್ಯುನಿಟಿ ಶಾಲೆಯು 1996ರಿಂದ ಕಾರ್ಯನಿರ್ವಹಿಸುತ್ತಿದೆ. ಸುಮಾರು 18 ವರ್ಷಗಳ ಅವಧಿಯಲ್ಲಿ ಶಾಲೆಯಿಂದ ಹತ್ತು ಹಲವು ಜನ ವಿದ್ಯಾರ್ಥಿಗಳು ಉತ್ತಮ ಕ್ರೀಡಾಪಟುಗಳಾಗಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಿದ್ದಾರೆ.

‘ಈ ಶಾಲೆಯು ಆರಂಭವಾದ ದಿನದಿಂದ ಅಂಗವಿಕಲ ವಿದ್ಯಾರ್ಥಿಗಳಲ್ಲಿ ಮನೋಬಲ ತುಂಬಿ, ಶಿಕ್ಷಣದ ಜೊತೆಗೆ ಕ್ರೀಡೆಗೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ’ ಎಂದು ಶಾಲೆಯ ಪ್ರಿನ್ಸಿಪಾಲ್‌ ಗೀತಾ ಶ್ರೀಧರ್‌ ಹೇಳಿದರು.

ಕ್ರೀಡಾ ಸಾಧನೆ:
* 2009ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಷಟಲ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶಾಲೆಯ ವಿದ್ಯಾರ್ಥಿ ಪರ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

* 2009ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಅಥ್ಲೆಟಿಕ್‌ ಟೂರ್ನಿಯಲ್ಲಿ ಶಾಲೆಯ ವಿದ್ಯಾರ್ಥಿಗಳಾದ ಕೆ.ಟಿ. ಪೊನ್ನಣ್ಣ, ಎಂ.ಟಿ. ಲವೀನ್‌, ಮೈಕಲ್‌ ಅಂಟೋನಿ, ಸಾಜನ್‌ ಖಾಲಿದ್‌ ಹಾಗೂ ಆಫ್ರೋಜ್‌ ಅವರ ತಂಡ ಭಾಗವಹಿಸಿತ್ತು. ಎರಡು ಚಿನ್ನ ಹಾಗೂ ಎರಡು ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿದೆ.

* 2010ರಲ್ಲಿ ಶಿಮ್ಲಾದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಫ್ಲೋರ್‌ ಹಾಕಿ ಸೆಲೆಕ್ಷನ್‌ ಸಮಿತಿಯಲ್ಲಿ ಭಾಗವಹಿಸಿದ್ದ ಎಂ.ಟಿ. ಲವೀನ್‌ ಬೆಳ್ಳಿ ಪದಕವನ್ನು ಬಾಚಿಕೊಂಡಿದ್ದಾರೆ.

*  2011ರಲ್ಲಿ ಜಿಲ್ಲಾ ಮಟ್ಟದ ಅಥ್ಲೆಟಿಕ್‌ ಟೂರ್ನಿಯಲ್ಲಿ ಭಾಗವಹಿಸಿದ್ದ ಕೆ.ಟಿ. ಪೊನ್ನಣ್ಣ, ಎಸ್‌.ಆರ್‌. ರಾಜೇಶ್‌, ಎಂ.ಟಿ. ಲವೀನ್‌, ಖಾಲಿದ್‌, ಪೂಜಾ, ತುಫಿರಾ, ಆಫ್ರೋಜ್‌, ಕಾರ್ತಿಕ್‌ ಹಾಗೂ ತುಫಿಲ್‌ ಅವರ ತಂಡವು 3 ಚಿನ್ನ, 4 ಬೆಳ್ಳಿ, 1 ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ.

* 2012ರಲ್ಲಿ ರಾಜಸ್ಥಾನದ ಅಲ್ವಾರ್‌ ಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸಾಫ್ಟ್‌ ಬಾಲ್‌ ಟೂರ್ನಿಯಲ್ಲಿ ಭಾಗವಹಿಸಿದ್ದ ಎಂ.ಟಿ. ಲವೀನ್‌ ಹಾಗೂ ಕೆ.ಟಿ. ಪೊನ್ನಣ್ಣ ಬೆಳ್ಳಿ ಪದಕವನ್ನು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.