ADVERTISEMENT

ಆಸ್ಪತ್ರೆ ಸುಧಾರಣೆಗೆ ಆಗ್ರಹಿಸಿ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 8:09 IST
Last Updated 4 ಡಿಸೆಂಬರ್ 2012, 8:09 IST

ಸೋಮವಾರಪೇಟೆ: ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿರುವ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಿ, ವ್ಯವಸ್ಥೆಯನ್ನು ಸುಧಾರಣೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಕಾವಲು ಪಡೆಯ ಕಾರ್ಯಕರ್ತರು ಸೋಮವಾರ ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ 12 ವೈದ್ಯರು ಕರ್ತವ್ಯ ನಿರ್ವಹಿಸಬೇಕಿದ್ದರೂ ಕೇವಲ 5 ಮಂದಿ ಮಾತ್ರ ಇದ್ದಾರೆ. ದಂತ ವೈದ್ಯ, ಇಎನ್‌ಟಿ, ಕಣ್ಣಿನ ತಜ್ಞರು, ಚರ್ಮರೋಗ ತಜ್ಞರ ಕೊರತೆ ಇದೆ. ಇದರೊಂದಿಗೆ ಸಮರ್ಪಕ ವಸತಿ ಗೃಹಗಳ ವ್ಯವಸ್ಥೆ ಇಲ್ಲ. ಡಿ ಗ್ರೂಪ್ ನೌಕರರ ಕೊರತೆಯೂ ಎದ್ದು ಕಾಣುತ್ತಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾವಲು ಪಡೆಯ ತಾಲ್ಲೂಕು ಅಧ್ಯಕ್ಷ ಕೆ.ಎನ್. ದೀಪಕ್ ಹೇಳಿದರು.

ಅನಸ್ತೇಸಿಯಾ ತಜ್ಞರು ವಾರದಲ್ಲಿ ಮೂರು ದಿನ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಶಸ್ತ್ರ ಚಿಕಿತ್ಸೆ ಸೇರಿದಂತೆ ಹೆರಿಗೆ ಸಂದರ್ಭದಲ್ಲಿ ಅನಾನೂಕೂಲ ಉಂಟಾಗುತ್ತಿದೆ. ಅಂತೆಯೇ ಆಸ್ಪತ್ರೆಯಲ್ಲಿ ಮೂಳೆ ಚಿಕಿತ್ಸೆಗೆ ಪರಿಕರಗಳ ಕೊರತೆ, ರಕ್ತ ಶೇಖರಣಾ ಕೊಠಡಿಯ ಕೊರತೆ, ಎಕ್ಸ್‌ರೇ ಸಮಸ್ಯೆ ಸೇರಿದಂತೆ ಕಟ್ಟಡಗಳ ದುರವಸ್ಥೆಯೂ ಹೇಳತೀರದ್ದಾಗಿದೆ. ಕೂಡಲೇ ಸರಿಪಡಿಸಲು ಸಂಬಂಧಿಸಿದ ಅಧಿಕಾರಿಗಳು ಮುಂದಾಗಬೇಕೆಂದು ಆಗ್ರಹಿಸಿದರು.

ಈ ಸಂಬಂಧಿತ ಮನವಿ ಪತ್ರವನ್ನು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಒ.ವಿ. ಕೃಷ್ಣಾನಂದ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು. ಸಂಘಟನೆಯ ತಾಲ್ಲೂಕು ಉಪಾಧ್ಯಕ್ಷ ಅರುಣ್ ಪೂಜಾರಿ, ಕಾರ್ಯದರ್ಶಿ ಬಿ.ವಿ. ರವಿ, ಪದಾಧಿಕಾರಿಗಳಾದ ರೋಹಿತ್, ಸೋಮೇಶ್, ರವಿ ಕಂಬಳ್ಳಿ, ಗಣೇಶ್, ನಾಗೇಶ್, ಮಂಜು, ರಾಘವೇಂದ್ರ, ಕಿರಣ್, ಲೋಕೇಶ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.