ADVERTISEMENT

‘ಗಾಂಧೀಜಿ ತತ್ವಗಳು ಎಲ್ಲೆಡೆ ಹರಡಲಿ’

ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 9:31 IST
Last Updated 3 ಅಕ್ಟೋಬರ್ 2017, 9:31 IST

ಮಡಿಕೇರಿ: ‘ವಿವಿಧತೆಯಲ್ಲಿ ಏಕತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದ ಮಹಾತ್ಮ ಗಾಂಧೀಜಿ ಅವರು ಜಾತೀಯತೆ ಹಾಗೂ ಅಸ್ಪೃಶ್ಯತೆ ನಿವಾರಣೆಗೆ ಸಾಕಷ್ಟು ಶ್ರಮಿಸಿದ್ದಾರೆ’ ಎಂದು ಸರ್ವೋದಯ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಪಿ. ರಮೇಶ್ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯಲ್ಲಿ ಅವರು ಮಾತನಾಡಿದರು.

‘ಸತ್ಯ ಮತ್ತು ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತರುವಲ್ಲಿ ಶ್ರಮಿಸಿದ ಮಹಾನ್ ಸಮಾಜ ಸುಧಾರಕ ಗಾಂಧೀಜಿ ಅವರ ತತ್ವಗಳು ಎಲ್ಲೆಡೆ ಹರಡಲಿ; ವಿದ್ಯಾರ್ಥಿಗಳು ಗಾಂಧೀಜಿ ಅವರ ಸತ್ಯ, ಸಿದ್ಧಾಂತ, ತತ್ವಗಳ, ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದು ರಮೇಶ್‌ ಕರೆ ನೀಡಿದರು.

ADVERTISEMENT

‘ಮಹಾತ್ಮ ಗಾಂಧೀಜಿ ಅವರು ಸಮಾನತೆ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು. ಅಹಿಂಸಾ ತತ್ವದ ಮಹತ್ವದ ಬಗ್ಗೆ ಜಗತ್ತಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಅವರು ವಿಚಾರಧಾರೆಗಳೂ ಇಂದಿಗೂ ಪ್ರಸ್ತುತ’ ಎಂದು ಹೇಳಿದರು.

ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಜೈ ಜವಾನ್ ಜೈ ಕಿಸಾನ್ ಘೋಷಣೆಯನ್ನು ಪ್ರಕಟಿಸುವ ಮೂಲಕ ದೇಶದ ಸೇನೆ ಹಾಗೂ ಕೃಷಿ ಕ್ಷೇತ್ರದ ಮಹತ್ವ ಸಾರಿದ್ದರು ಎಂದು ರಮೇಶ್‌ ವಿವರಿಸಿದರು.

ಮಹಾತ್ಮ ಗಾಂಧಿ ಜಯಂತಿಯನ್ನು ‘ಅಂತರ ರಾಷ್ಟ್ರೀಯ ಅಹಿಂಸಾ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ರಾಷ್ಟ್ರದ ಅಭಿವೃದ್ಧಿಗೆ ಮಹಾತ್ಮ ಗಾಂಧೀಜಿ ಅವರ ಕೊಡುಗೆ ಅಪಾರ. ಜಿಲ್ಲಾ ಕೇಂದ್ರದಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಈಗಾಗಲೇ ಜಿಲ್ಲಾಡಳಿತ ವತಿಯಿಂದ ಜಾಗ ನೀಡಲಾಗಿದೆ. ಅದರಂತೆ ಸರ್ಕಾರದಿಂದ ಹಣವೂ ಬಿಡುಗಡೆಯಾಗಿದೆ. ಆ ನಿಟ್ಟಿನಲ್ಲಿ ಆದಷ್ಟು ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಭರವಸೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಮಾತನಾಡಿ, ಯಾವುದೇ ಸಮಸ್ಯೆಗಳನ್ನು ಸಂಧಾನ ಹಾಗೂ ರಾಜಿಸೂತ್ರದಿಂದ ಬಗೆಹರಿಸಲು ಸಾಧ್ಯ ಎಂಬುದನ್ನು ಗಾಂಧೀಜಿ ಅವರು ಮನಗಂಡಿದ್ದರು ಎಂದು ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿರುವ ವಿಶೇಷ ಸಂಚಿಕೆಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಸರ್ವೋದಯ ಸಮಿತಿ ಸದಸ್ಯ ಕೆ.ಟಿ. ಬೇಬಿ ಮ್ಯಾಥ್ಯು, ಕೋಡಿ ಚಂದ್ರಶೇಖರ, ಅಂಬೆಕಲ್ ಕುಶಾಲಪ್ಪ, ಅಂಬೇಕಲ್ ನವೀನ್, ಸುಬ್ರಮಣಿ, ವಾಸುದೇವ, ಆಹಾರ ಇಲಾಖೆ ಉಪ ನಿರ್ದೇಶಕ ಪುಟ್ಟಸ್ವಾಮಿ, ಉಪ ವಿಭಾಗಾಧಿಕಾರಿ ನಂಜುಂಡೇಗೌಡ, ಪೌರಾಯುಕ್ತೆ ಬಿ.ಶುಭಾ, ತಹಶೀಲ್ದಾರ್ ಕುಸುಮಾ, ವಾರ್ತಾಧಿಕಾರಿ ಚಿನ್ನಸ್ವಾಮಿ ಹಾಜರಿದ್ದರು.

***
ಅಧಿಕಾರ ವಿಕೇಂದ್ರೀಕರಣ ಮಾಡುವ ನಿಟ್ಟಿನಲ್ಲಿ, ‌ಸರ್ಕಾರವು ‘ಬಾಪೂಜಿ ಸೇವಾ ಕೇಂದ್ರ’ ತೆರೆದು, ಆಮೂಲಕ ಹಲವು ಸೌಲಭ್ಯಗಳನ್ನು ತಲುಪಿಸುತ್ತಿದೆ
ಟಿ.ಪಿ. ರಮೇಶ್‌, ಜಿಲ್ಲಾ ಅಧ್ಯಕ್ಷ, ಸರ್ವೋದಯ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.