ADVERTISEMENT

`ಜನರಲ್ ತಿಮ್ಮಯ್ಯ ಸೈನಿಕರಿಗೆ ಆದರ್ಶ'

ಜನರಲ್ ತಿಮ್ಮಯ್ಯ ಅವರ 107ನೇ ಜನ್ಮದಿನಾಚರಣೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 5:57 IST
Last Updated 1 ಏಪ್ರಿಲ್ 2013, 5:57 IST

ಮಡಿಕೇರಿ: `ಜನರಲ್ ತಿಮ್ಮಯ್ಯ ಅವರ ದೇಶಪ್ರೇಮ, ಶಿಸ್ತು ಹಾಗೂ ಮಾನವೀಯ ಗುಣಗಳು ಸೈನಿಕರಿಗೆ ಆದರ್ಶವಾಗಿವೆ' ಎಂದು ಏರ್ ಮಾರ್ಷಲ್ (ನಿವೃತ್ತ) ಕೆ.ಎಂ. ಕಾರ್ಯಪ್ಪ ಪ್ರಶಂಶಿಸಿದರು.

ಜನರಲ್ ತಿಮ್ಮಯ್ಯ ಅವರು ಹುಟ್ಟಿದ ಮನೆಯಾದ ನಗರದ ಸನ್ನಿಸೈಡ್ ಕಟ್ಟಡದ ಬಳಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ ತಿಮ್ಮಯ್ಯ ಅವರ 107ನೇ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಸೈಪ್ರಸ್ ದೇಶದಲ್ಲಿ ಶಾಂತಿ ನೆಲೆಸಲು ಮುಖ್ಯವಾಗಿ ಶ್ರಮಿಸಿದ್ದ ತಿಮ್ಮಯ್ಯ ಅವರಿಗೆ ಅವರ ಮರಣಾನಂತರ ವಿಶ್ವಸಂಸ್ಥೆಯು ಶ್ರದ್ಧಾಂಜಲಿ ಸಲ್ಲಿಸಿತ್ತು. ಆ ಸಂದರ್ಭದಲ್ಲಿ ನಾನು ಪಾಕಿಸ್ತಾನದಲ್ಲಿ ಯುದ್ಧಕೈದಿಯಾಗಿ ಬಂಧಿಯಾಗಿದ್ದೆ ಎಂದು ಅವರು ಸ್ಮರಿಸಿದರು.

ತಿಮ್ಮಯ್ಯ ಅವರಲ್ಲಿದ್ದ ಮಾನವೀಯ ಗುಣಗಳು, ಸಾಮರಸ್ಯ ಭಾವನೆಗಳು ನನಗೆ ತುಂಬಾ ಇಷ್ಟವಾಗಿದ್ದವು. ನನಗೆ ಅವರೇ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂ ಅಧ್ಯಕ್ಷ ಕರ್ನಲ್ (ನಿವೃತ್ತ) ಕಟ್ರತಂಡ ಸುಬ್ಬಯ್ಯ ಮಾತನಾಡಿ, ತಿಮ್ಮಯ್ಯ ಅವರ ಹುಟ್ಟಿದ ಮನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್‌ಟಿಒ ಕಚೇರಿಯನ್ನು ಸ್ಥಳಾಂತರಿಸಬೇಕು. ಈ ಕಟ್ಟಡವನ್ನು ತಿಮ್ಮಯ್ಯ ಅವರ ಸ್ಮಾರಕವನ್ನಾಗಿಸಬೇಕೆನ್ನುವ ಜಿಲ್ಲೆಯ ಜನತೆಯ ಬೇಡಿಕೆಯನ್ನು ಆದಷ್ಟು ಶೀಘ್ರ ಈಡೇರಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಡಾ. ಎನ್.ವಿ. ಪ್ರಸಾದ್ ಅವರು ಸಮಾರಂಭವನ್ನು ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಬಿ. ಆಂಜನಪ್ಪ ಮಾತನಾಡಿದರು. ಲೆಫ್ಟಿನೆಂಟ್ ಜನರಲ್ (ನಿವೃತ್ತ) ಬಿ.ಸಿ. ನಂದಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಎಂ. ಅನುಚೇತ್, ಉಪ ವಿಭಾಗಾಧಿಕಾರಿ ಜಿ.ಪ್ರಭು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಾಂತಮ್ಮ, ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿದೇಶಕರಾದ ಬಿ.ಆರ್. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ನಗರಸಭೆ ಆಯುಕ್ತ ಶಶಿಕುಮಾರ್ ಸ್ವಾಗತಿಸಿದರು. ಹಿಂದುಳಿದ, ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಪುಟ್ಟರಾಜು ವಂದಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂಜುನಾಥ ಮಣಜೂರು ನಿರೂಪಿಸಿದರು. 

ಕಾರ್ಯಕ್ರಮದ ನಂತರ ಸುಳ್ಳಿಮಾಡ ಗೌರಿ ನಂಜಪ್ಪ ಅವರ ತಂಡದಿಂದ ಉಮ್ಮತ್ತಾಟ್, ಮುದ್ದಪ್ಪ ಮತ್ತು ತಂಡದವರಿಂದ ಕೋಲಾಟ್ ಹಾಗೂ ಕಣ್ಣಾನೂರಿನ ಆರ್ಮಿ ಬ್ಯಾಂಡ್‌ನಿಂದ ಆಕರ್ಷಕ ವಾದ್ಯ ನುಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.