ADVERTISEMENT

ಬೈತೂರಪ್ಪ ಪೊವ್ವದಿ ಕ್ಷೇತ್ರದ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 10:12 IST
Last Updated 18 ಡಿಸೆಂಬರ್ 2012, 10:12 IST

ಕುಶಾಲನಗರ:  ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿ ಗ್ರಾಮದಲ್ಲಿ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯ ಟ್ರಸ್ಟ್ ವತಿಯಿಂದ ಬೈತೂರಪ್ಪ ಪೊವ್ವದಿ ಕ್ಷೇತ್ರದ ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವ ಸೋಮವಾರ ಆರಂಭವಾಯಿತು.

ವಾರ್ಷಿಕೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ದೇವರ ವಿಗ್ರಹಗಳನ್ನು ವಿಶೇಷವಾಗಿ ಅಲಂಕರಿಸಿ ಶ್ರದ್ಧಾ, ಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು. ಉತ್ಸವದಲ್ಲಿ ಕೊಡಗರಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದರು. ವೇದಬ್ರಹ್ಮ ಶಿವರಾಮ್ ಅವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀಗಳಾದ ವೇದಮೂರ್ತಿ, ಗೋವಿಂದಭಟ್ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿಕೊಟ್ಟರು. ದೇವಸ್ಥಾನದಲ್ಲಿ ಬೆಳಿಗ್ಗೆಯಿಂದದಲೇ ಗಣಪತಿ ಹೋಮ, ಪೂರ್ಣಾಹುತಿ, ದೇವರುಗಳಿಗೆ ಮಹಾಪೂಜೆ ಸಲ್ಲಿಸಲಾಯಿತು. ಧಾರ್ಮಿಕ ವಿಧಿ ವಿಧಾನಗಳು ಟ್ರಸ್ಟ್‌ನ ಅಧ್ಯಕ್ಷ ಕೆ.ಎನ್. ಪೂಣಚ್ಚ, ಕಾರ್ಯದರ್ಶಿ ಬಿ.ಸಿ. ದಿನೇಶ್ ಸಮ್ಮುಖದಲ್ಲಿ ನೆರವೇರಿದವು.

ಟ್ರಸ್ಟ್‌ನ ಖಜಾಂಚಿ ಡಾ ಎ.ಬಿ. ತಮ್ಮಯ್ಯ, ಟ್ರಸ್ಟಿಗಳಾದ ಸುರೇಶ್ ಚಂಗಪ್ಪ, ಕೆ.ಎಸ್. ಮಂಜುನಾಥ್, ಎಂ.ಎ. ಬೋಪಯ್ಯ, ಹ್ಯಾರಿ ಕಾರ್ಯ ಪ್ಪ, ದಾನಿಗಳಾದ ಡಿ. ವಿನೋದ್ ಶಿವಪ್ಪ, ಹರಿಶ್ಚಂದ್ರ ಪೈ ಮತ್ತಿತರರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಭಕ್ತಾದಿಗಳಿಗೆ ಸಮಿತಿ ವತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಡೆದ ಸೌರಭ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಶಾಲನಗರ ಕಾವೇರಿ ಕಲಾ ಪರಿಷತ್ ಕಲಾವಿದರು ನಡೆಸಿಕೊಟ್ಟ ಭಕ್ತಿ ಸಂಗೀತ - ನೃತ್ಯ ವೈವಿಧ್ಯ ಪ್ರೇಕ್ಷಕರ ಗಮನ ಸೆಳೆಯಿತು.

ದೇವಾಲಯವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಉತ್ಸವ ದ ಅಂಗವಾಗಿ ಡಿ. 18 ರ ಮಂಗಳವಾರ ದೇವಸ್ಥಾನದಲ್ಲಿ ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ರ ತನಕ ಕಲಶ ಪೂಜೆ, ಚಂಡಿಕಾ ಹವನ ಹಾಗೂ ಮಹಾಪೂಜೆ ಏರ್ಪಡಿಸಲಾಗಿದೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.