ADVERTISEMENT

ದಲಿತ ಸಂಘಟನೆಗಳಿಂದ ಒಗ್ಗಟ್ಟಿನ ಮಂತ್ರ

ಒಂದುಗೂಡಿದ ದಸಂಸದ ಹಲವು ಬಣಗಳು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 8:45 IST
Last Updated 8 ನವೆಂಬರ್ 2022, 8:45 IST

ಮಡಿಕೇರಿ: ‘ಕೊಡಗು ಜಿಲ್ಲೆಯ ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳು ಒಗ್ಗಟ್ಟಿನ ಮಂತ್ರ ಪಠಿಸಿವೆ. 7 ಬಣಗಳ ಮುಖಂಡರು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯಡಿ ಒಂದುಗೂಡುವ ನಿರ್ಧಾರವನ್ನು’ ಸೋಮವಾರ ಇಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

ಸಮಿತಿಯ ಜಿಲ್ಲಾ ಸಂಚಾಲಕ ಜೆ.ಆರ್.ಫಾಲಾಕ್ಷ ಮಾತನಾಡಿ, ‘ಹಲವು ಬಣಗಳಾಗಿ ಒಡೆದು ಚೂರಾಗಿದ್ದ ದಲಿತ ಸಂಘರ್ಷ ಸಮಿತಿಯನ್ನು ಒಂದುಗೂಡಿಸುವ ಮಹತ್ವದ ಕೆಲಸ ಆರಂಭವಾಗಿದೆ. ಈಗಾಗಲೇ ರಾಜ್ಯಮಟ್ಟದಲ್ಲಿ ಪ್ರಮುಖವಾಗಿದ್ದ 12 ಬಣಗಳು ಒಂದುಗೂಡಿವೆ’ ಎಂದು ತಿಳಿಸಿದರು.

‘ಕೊಡಗು ಜಿಲ್ಲೆಯಲ್ಲೂ ಪ್ರಮುಖವಾಗಿದ್ದ 7 ಬಣಗಳು ಒಂದುಗೂಡುವ ನಿರ್ಧಾರಕ್ಕೆ ಬಂದಿವೆ. ಇನ್ನು ಮುಂದೆ ಎಲ್ಲರೂ ಒಂದಗೂಡಿ ಶೋಷಣೆಯ ವಿರುದ್ಧ ಹೋರಾಟ ನಡೆಸಲಾಗುವುದು’ ಎಂದು ಹೇಳಿದರು.

ADVERTISEMENT

‘ಡಿ. 6ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಿತಿ ವತಿಯಿಂದ ‘ದಲಿತರ ಸಾಂಸ್ಕೃತಿಕ ಪ್ರತಿರೋಧ’ ಎಂಬ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ. ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ದಲಿತ ಸಂಘಟನೆಗಳ ಬೃಹತ್ ಏಕತಾ ಸಮಾವೇಶವಾಗಿದೆ’ ಎಂದು ಮಾಹಿತಿ ನೀಡಿದರು.

ವಿಭಾಗೀಯ ಸಂಚಾಲಕ ಎಚ್.ಎಸ್.ಕೃಷ್ಣಪ್ಪ ಮಾತನಾಡಿ, ‘ಈ ಸಮಾವೇಶದಲ್ಲಿ ಸಾಹಿತಿ ದೇವನೂರ ಮಹಾದೇವ, ಹೋರಾಟಗಾರರಾದ ಎಸ್.ಮರಿಸ್ವಾಮಿ, ಇಂದೂಧರ ಹೊನ್ನಾಪುರ, ರಾಮದೇವ ರಾಕೆ, ಕೆ.ರಾಮಯ್ಯ, ಶಿವಾಜಿ ಗಣೇಶನ್, ಎಚ್.ಎಂ.ರುದ್ರಸ್ವಾಮಿ, ಲಕ್ಷ್ಮೀಪತಿ ಕೋಲಾರ, ಮಂಗ್ಳೂರ ವಿಜಯ, ಹುಲ್ಕೆರೆ ಮಹಾದೇವ, ಬಾಬು ಬಂಡಾರಿಗಲ್, ಕೆ.ದೊರೈರಾಜ್, ಸಿ.ಬಸವಲಿಂಗಯ್ಯ, ಎಚ್.ಜನಾರ್ದನ್, ಕುಪ್ಪೆ ನಾಗರಾಜ್, ಗಂಗಮ್ಮ ತುಮಕೂರು, ಭಾರತೀ ರಾಜಣ್ಣ, ಪುರುಷೋತ್ತಮದಾಸ್, ಸಿ.ಜಿ.ಶ್ರೀನಿವಾಸ್, ಪಿಚ್ಚಳ್ಳಿ ಶ್ರೀನಿವಾಸ್, ಗೊಲ್ಲಹಳ್ಳಿ ಶಿವಪ್ರಸಾದ್ ಭಾಗವಹಿಸಲಿದ್ದಾರೆ’ ಎಂದರು.

‘ಈ ಸಮಾವೇಶದಲ್ಲಿ ಎನ್.ವೆಂಕಟೇಶ್, ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರಗೋಡು, ವಿ.ನಾಗರಾಜ್, ಡಾ.ಡಿ.ಜಿ.ಸಾಗರ್, ಲಕ್ಷ್ಮೀನಾರಾಯಣ ನಾಗವಾರ, ಅಣ್ಣಯ್ಯ, ಅರ್ಜುನ ಭದ್ರೆ, ಎನ್.ಮುನಿಸ್ವಾಮಿ, ಎಂ.ಸೋಮಶೇಖರ್, ಜಿಗಣಿ ಶಂಕರ್, ಎಸ್.ಆರ್.ಕೊಲ್ಲೂರು ಬಣಗಳು ಒಂದುಗೂಡಲಿವೆ’ ಎಂದರು.

‘ಮುಂದಿನ ಚುನಾವಣೆ ಹೊತ್ತಿಗೆ ದಲಿತರು ಒಗ್ಗಟ್ಟಾಗಿ ಜಾತ್ಯಾತೀತ ನಿಲುವ ಹೊಂದಿರುವ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. ಈಗ ಇರುವ ಸರ್ಕಾರ ದಲಿತರನ್ನು ಹಿಂದೆಂದಿಗಿಂತಲೂ ಹೆಚ್ಚು ಶೋಷಿಸುತ್ತಿದೆ’ ಎಂದು ಹರಿಹಾಯ್ದರು.

ಸಮಿತಿಯ ಸಂಚಾಲಕರಾದ ಎಸ್.ವೀರೇಂದ್ರ, ಎಂ.ಎನ್.ರಾಜಪ್ಪ, ಎಚ್.ಎಲ್.ದಿವಾಕರ್, ಎಚ್.ಆರ್.ಪರಶುರಾಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.