ಮಡಿಕೇರಿ: ಗಾಂಜಾ ಮಾರಾಟದ ಆರೋಪದ ಮೇಲೆ ಬ್ಯಾಂಕ್ ಉದ್ಯೋಗಿ ಸೇರಿದಂತೆ ಐವರು ಆರೋಪಿಗಳನ್ನು ನಗರ ಠಾಣೆ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ.
ವಿರಾಜಪೇಟೆ ಸಂತ ಅನ್ನಮ್ಮ ಕಾಲೇಜಿನ ಬಿ.ಬಿ.ಎಂ ವಿದ್ಯಾರ್ಥಿ, ಹೊದವಾಡ ಗ್ರಾಮದ ನಿವಾಸಿ ಮೊಹಮ್ಮದ್ ಅಸ್ಲಾಂ (23), ಮಡಿಕೇರಿ ಎಫ್.ಎಂ.ಸಿ ಕಾಲೇಜು ಅಂತಿಮ ವರ್ಷದ ಎಚ್ಆರ್ಡಿ ವಿದ್ಯಾರ್ಥಿ, ನಾಪೋಕ್ಲು ಸಮೀಪದ ಬೇತು ಗ್ರಾಮದ ನಿವಾಸಿ ಕೆ.ಕೆ.ಬೋಪಣ್ಣ (22), ಬೇತು ಗ್ರಾಮದ ಕೃಷಿಕ ಸಿ.ಸಿ.ಅಕ್ಷತ್ (24), ಮಡಿಕೇರಿಯ ಎಸ್ಬಿಐ ಬ್ಯಾಂಕ್ನ ಖಾತೆ ನಿರ್ವಹಣೆ ಕೆಲಸ ಮಾಡುತ್ತಿದ್ದ, ನಗರದ ಚೈನ್ಗೇಟ್ ಬಳಿ ಪೋಸ್ಟಲ್ ಕ್ವಾಟ್ರರ್ಸ್ನಲ್ಲಿ ವಾಸವಿದ್ದ ಸುಮಂತ್ (22) ಹಾಗೂ ಪುಟಾಣಿ ನಗರದ ನಿವಾಸಿ, ಪೇಟಿಂಗ್ ಕೆಲಸ ಮಾಡುತ್ತಿದ್ದ ರಾಜೇಶ್ (22) ಬಂಧಿತರು.
ಬಂಧಿತರಿಂದ ₹1.26 ಲಕ್ಷ ಮೌಲ್ಯದ 750 ಗ್ರಾಂ ಗಾಂಜಾ, 11ಗ್ರಾಂ ಆ್ಯಂಫೆಟಮೈನ್,0.8 ಗ್ರಾಂಎಕ್ಸಿಟೆಸ್ಸಿ ಹಾಗೂ ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ.
ಚೈನ್ಗೇಟ್ ಬಳಿ ಐವರು ಗಾಂಜಾ ಖರೀದಿಯ ವಿಚಾರದ ಬಗ್ಗೆ ಮಾತುಕತೆ ನಡೆಸುತ್ತಿದ್ದರು. ಈ ಮಾಹಿತಿ ಆಧರಿಸಿ, ನಗರ ಠಾಣೆಯ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರ ಮಾರ್ಗದರ್ಶನದಲ್ಲಿ ಸಿಪಿಐ ಪಿ.ವಿ.ವೆಂಕಟೇಶ್, ಪಿಎಸ್ಐ ಎಂ.ಟಿ.ಅಂತಿಮಾ, ಸಿಬ್ಬಂದಿ ಕೆ.ಕೆ.ದಿನೇಶ್, ಎಚ್.ಎಸ್.ಶ್ರೀನಿವಾಸ್, ಬಿ.ಕೆ.ಪ್ರವೀಣ್, ನಾಗರಾಜ್ ಕಡಗನ್ನವರ್, ಅರುಣ್ಕುಮಾರ್, ಸುನಿಲ್, ಕೆ.ಎಂ.ಧರ್ಮ, ಎಲ್.ಎಸ್.ಶಶಿಕುಮಾರ್, ದಿವ್ಯಾ, ಸೌಮ್ಯಾ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.