ಸುಂಟಿಕೊಪ್ಪ: ‘ಕೊಡಗಿನ ಅಭಿವೃದ್ಧಿಗೆ ಕೇಂದ್ರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನನ್ನಿಂದಾಗುವ ಪ್ರಯತ್ನ ಮಾಡುತ್ತಿದ್ದೇನೆ’ ಎಂದು ಕೊಡಗು -ಮೈಸೂರು ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಇಲ್ಲಿನ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
‘ಕೊಡಗಿನ ಜನರಲ್ಲಿ ರಾಷ್ಟ್ರೀಯತೆ ತುಂಬಿದ್ದು, ನಾವೆಲ್ಲರೂ ಅದನ್ನೇ ಅವಲಂಬಿಸುತ್ತಿದ್ದೇವೆ. ಹಾಗಾಗಿ ಪ್ರಧಾನಿಯವರ ಕನಸಾದ ಧರ್ಮರಕ್ಷಣೆಯ ಮೇಲೆ ದೇಶದ ಅಭಿವೃದ್ಧಿಯ ನಿಲುವಿಗೆ ನಾವೆಲ್ಲರೂ ಬದ್ಧರಾಗಬೇಕಾಗಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಭಾರತ ಅಭಿವೃದ್ಧಿಯಲ್ಲಿ ಮೂರನೇ ರಾಷ್ಟ್ರವಾಗಿ ಹೊರಹೊಮ್ಮಲಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾರತೀಯರು ಕೈಜೋಡಿಸಬೇಕು’ ಎಂದು ಅವರು ಸಲಹೆ ನೀಡಿದರು.
‘ಕೊಡಗಿನಲ್ಲಿ ಸುಮಾರು 175ಕ್ಕಿಂತಲೂ ಹೆಚ್ಚು ತಡೆಗೋಡೆಗಳ ನಿರ್ಮಾಣ, ರಸ್ತೆಗಳ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರದಿಂದ ಅನುದಾನ ಬಿಡುಗಡೆ ಮಾಡಲು ಸಿದ್ಧತೆ ಮಾಡಲಾಗಿದೆ. ಬೆಳಗೋಳದಿಂದ ಕುಶಾಲನಗರಕ್ಕೆ ರೈಲ್ವೆ ಕಾಮಗಾರಿಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದರೂ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಅದು ಕುಂಠಿತವಾಗಿದೆ. ರಾಜ್ಯ ಸರ್ಕಾರ ರೈಲ್ವೆ ನಿರ್ಮಾಣದ ಕಾಮಗಾರಿಗೆ ಅನುದಾನದ ಕೊರತೆ ಮುಂದಿಟ್ಟಿದ್ದರಿಂದ ಕೇಂದ್ರ ಸರ್ಕಾರ ಈ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒತ್ತಡ ಮತ್ತು ಬೇಡಿಕೆ ಸಲ್ಲಿಸುತ್ತಿದ್ದೇವೆ’ ಎಂದು ಅವರು ತಿಳಿಸಿದರು.
ಜನರ ಸಮಸ್ಯೆಗಳನ್ನು ಆಲಿಸಲು ಸದಾ ಸಿದ್ದನಿದ್ದೇನೆ. ಮಡಿಕೇರಿಯಲ್ಲಿ ಸಂಸದ ಕಚೇರಿಯನ್ನು ತೆರೆಯಲಾಗಿದೆ. ಆ ಕಚೇರಿಗೆ ಬಂದು ಮುಕ್ತವಾಗಿ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬಹುದೆಂಬುದಾಗಿ ಅವರು ತಿಳಿಸಿದರು.
ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ‘ಪಕ್ಷದ ಬಲವರ್ಧನೆಗೆ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕು’ ಎಂದರು.
ಇದೇ ವೇಳೆ 10ಕ್ಕೂ ಸಮಸ್ಯೆಗಳ ಮನವಿಯನ್ನು ಸಾರ್ವಜನಿಕರು ಸಂಸದರಿಗೆ ಸಲ್ಲಿಸಿದರು.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ಮುಖಂಡರಾದ ದಾಸಂಡ ರಮೇಶ್, ಸಂಜು ಪೊನ್ನಪ್ಪ, ಸೋಮವಾರಪೇಟೆ ಮಂಡಲ ಅಧ್ಯಕ್ಷ ಗೌತಮ್, ಕಾರ್ಯದರ್ಶಿಗಳಾದ ಮೋಕ್ಷಿತ್ ಮತ್ತು ಸೋಮೇಶ್, ವಿಮಲಾವತಿ ಬಿ.ಕೆ.ಪ್ರಶಾಂತ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.