ಮಡಿಕೇರಿ: ಕೋವಿಡ್ ಸೋಂಕು ತಗುಲಿದ್ದ ಕೊಡಗಿನ 32 ವರ್ಷದ ವ್ಯಕ್ತಿಯು ಸಂಪೂರ್ಣ ಗುಣಮುಖರಾಗಿದ್ದಾರೆ. ಚೇತರಿಕೆಯಾದ ಮೇಲೆ ಈ ವ್ಯಕ್ತಿಯ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಮತ್ತೊಮ್ಮೆ ಮೈಸೂರು, ಪುಣೆಯ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಎರಡು ವರದಿಗಳೂ ನೆಗೆಟಿವ್ ಬಂದಿದ್ದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ದುಬೈನಿಂದ ಇಂಡಿಗೊ ವಿಮಾನದಲ್ಲಿ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾರ್ಚ್ 15ರಂದು ಬಂದಿದ್ದರು. ಅಂದೇ ರಾತ್ರಿ ಅಲ್ಲಿಂದ ರಾಜಹಂಸ ಬಸ್ನಲ್ಲಿ ಪ್ರಯಾಣ ಬೆಳೆಸಿ, ಮಾರ್ಚ್ 16ರಂದು ಬೆಳಿಗ್ಗೆ ಕೊಡಗಿನ ಮೂರ್ನಾಡಿಗೆ ಬಂದಿದ್ದರು. ಎರಡು ದಿನ ಜಿಲ್ಲೆಯ ವಿವಿಧೆಡೆ ಓಡಾಟ ನಡೆಸಿದ್ದರು. ಅದಾದ ಮೇಲೆ ಅವರಲ್ಲಿ ರೋಗ ಲಕ್ಷಣ ಕಾಣಿಸಿಕೊಂಡಿತ್ತು. ಜಿಲ್ಲಾ ಆಸ್ಪತ್ರೆಗೆ ಸ್ವಯಂ ಪ್ರೇರಣೆಯಿಂದ ಬಂದು ದಾಖಲಾಗಿದ್ದರು.
ಸೋಂಕು ದೃಢಪಟ್ಟ ಮೇಲೆ ಆ ವ್ಯಕ್ತಿ ಒಂದು ದಿನ ವಾಸ್ತವ್ಯ ಮಾಡಿದ್ದ ಕೇತುಮೊಟ್ಟೆ ಗ್ರಾಮದ ಜನರು ಮನೆಯಿಂದ ಹೊರ ಬಾರದಂತೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು. ಈಗ ಆ ನಿರ್ಬಂಧ ತೆರವು ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.