ADVERTISEMENT

ದಸರೆಯ ಯಶಸ್ಸಿನ ಹಿಂದೆ ಇದ್ದಾರೆ ನಿರೂಪಕರು

ಸುಮಧುರ ಮಾತುಗಳಿಂದ ಸಪ್ಪೆ ಎನಿಸಿದ ಕಾರ್ಯಕ್ರಮಗಳಿಗೂ ಸಿಹಿಯ ಹೂರಣ ತುಂಬಿದವರು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 4:37 IST
Last Updated 12 ಅಕ್ಟೋಬರ್ 2025, 4:37 IST
ದಸರಾ ಕಾರ್ಯಕ್ರಮವೊಂದರ ವೇಳೆ ನಿರೂಪಕರ ತಂಡ ಮುಗುಳ್ನಗುತ್ತಾ ಸಂತಸ ವ್ಯಕ್ತಪಡಿಸಿದ್ದು ಹೀಗೆ
ದಸರಾ ಕಾರ್ಯಕ್ರಮವೊಂದರ ವೇಳೆ ನಿರೂಪಕರ ತಂಡ ಮುಗುಳ್ನಗುತ್ತಾ ಸಂತಸ ವ್ಯಕ್ತಪಡಿಸಿದ್ದು ಹೀಗೆ   

ಮಡಿಕೇರಿ: ದಸರೆಗಾಗಿ ತೆರೆಮರೆಯಲ್ಲಿ ಅವಿರತವಾಗಿ ದುಡಿದವರು ನಿರೂಪಕರು. ದಸರಾ ಕಾರ್ಯಕ್ರಮಗಳನ್ನು ಸೂಕ್ಷ್ಮವಾಗಿ ನೋಡಿದವರಿಗೆ ಅವುಗಳ ಯಶಸ್ಸಿನ ಹಿಂದೆ ನಿರೂಪಕರ ಶ್ರಮ ಅಗಾಧವಾಗಿರುವುದು ಅರಿವಾಗದೇ ಇರದು. ಬಹಳಷ್ಟು ಕಾರ್ಯಕ್ರಮಗಳು ನಿರೂಪಣಾ ತಂತ್ರಗಾರಿಕೆಯಿಂದಲೇ ಕಳೆಗಟ್ಟಿದ್ದೂ ಉಂಟು.

ಅದರಲ್ಲೂ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಣೆಯಂತೂ ಬೇರೆಲ್ಲ ಕಾರ್ಯಕ್ರಮಗಳಿಗಿಂತ ತೀರಾ ಭಿನ್ನ. ವಿಶೇಷವಾದ ನಿರೂಪಣೆ ಇದಕ್ಕೆ ಬೇಕೇ ಬೇಕು. ಜೊತೆಗೆ, ಸುದೀರ್ಘ ಕಾಲದ ಕಾರ್ಯಕ್ರಮಗಳಿಂದ ಅತೀವ ಬಳಲಿಕೆಯೂ ಇದರಲ್ಲಿದೆ. ಇದೆಲ್ಲವನ್ನೂ ಮೀರಿ ನಿರೂಪಕರು ದಸರಾ ಯಶಸ್ಸಿಗೆ ಕಾರಣೀಭೂತರಾದರು.

ಬೇರೆ ಕಾರ್ಯಕ್ರಮಗಳಲ್ಲಿರುವಂತೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪೂರ್ವತಯಾರಿ ಇರಲಿಲ್ಲ. ಇಲ್ಲಿಗೆ ಬರುವ ಕಲಾವಿದರ ಪರಿಚಯವೂ ಇವರಿಗೆ ಇರಲಿಲ್ಲ. ಬಹಳಷ್ಟು ಸಂದರ್ಭಗಳಲ್ಲಿ ಯಾವುದೇ ‘ಸ್ಕ್ರಿಪ್ಟ್‌’ ಇಲ್ಲದೇ ಆಶು ನಿರೂಪಣೆಯನ್ನೇ ಮಾಡಬೇಕಾದ ಪ್ರಸಂಗಗಳೂ ಸೃಷ್ಟಿಯಾದವು. ಇಷ್ಟಾದರೂ, ಯಾವುದೇ ಕಾರ್ಯಕ್ರಮಗಳಲ್ಲೂ ಜಾಳುಜಾಳಾದ ನಿರೂಪಣೆ ಕಂಡು ಬರಲಿಲ್ಲ.

ADVERTISEMENT

ನಿರೂಪಣೆ ಮಾಡಿದ ಎಲ್ಲರೂ ತಮ್ಮ ಅತೀವವಾದ ಸಮಯಪ್ರಜ್ಞೆ ಮೆರೆದಿದ್ದು ವಿಶೇಷ. ಕೆಲವು ಕಾರ್ಯಕ್ರಮಗಳಲ್ಲಿ ಸ್ವಾಗತ ಭಾಷಣವನ್ನೂ ಮಾಡಿದ ಉದಾಹರಣೆಗಳಿವೆ.

ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳು ತಡವಾಗಿ ಆರಂಭವಾಗಿ, ತಡವಾಗಿ ಮುಕ್ತಾಯವಾದವು. ರಾತ್ರಿ 12ರ ನಂತರವೂ ಕಾರ್ಯಕ್ರಮಗಳು ನಡೆದಿವೆ. ಇದರಿಂದ ಸಭಿಕರಿಗೆ ಉಂಟಾಗುವ ಬೇಸರ, ಕಲಾವಿದರಿಗೆ ಉಂಟಾಗುವ ಕಿರಿಕಿರಿಗಳನ್ನೆಲ್ಲವನ್ನೂ ಸರಿದೂಗಿಸಿಕೊಂಡು ಕಾರ್ಯಕ್ರಮವನ್ನು ತಮ್ಮ ಹೆಗಲಿಗೇರಿಸಿಕೊಂಡು ಯಶಸ್ಸಿನ ಶಿಖರಕ್ಕೆ ನಿರೂಪಕರು ಮುಟ್ಟಿಸಿದರು.

ಮಡಿಕೇರಿ ದಸರಾ ಕಾರ್ಯಕ್ರಮಗಳಲ್ಲಿ ವಿನೋದ್ ಮೂಡಗದ್ದೆ, ಬಾಳೆಯಡ ದಿವ್ಯಾ ಮಂದಪ್ಪ, ಚೋಕಿರ ಅನಿತಾ ದೇವಯ್ಯ, ಸೌಮ್ಯ ಶೆಟ್ಟಿ, ಎಚ್.ಟಿ.ಅನಿಲ್, ಜಿ.ಚಿದ್ವಿಲಾಸ್, ಕುಡೆಕಲ್‌ ಸಂತೋಷ್, ಕೆ.ಜಯಲಕ್ಷ್ಮಿ, ಸುಜಲಾದೇವಿ, ರುಬಿನಾ, ಕೇಡನ ಪ್ರಗತಿ, ಪಿ.ಎಂ.ರವಿ ಹಾಗೂ ಇತರರು ಯಶಸ್ವಿ ನಿರೂಪಣೆ ಮಾಡಿದರು.

ನಿರೂಪಕರ ಪಾತ್ರ ಹಿರಿದು

ಗೋಣಿಕೊಪ್ಪಲು: ಗೋಣಿಕೊಪ್ಪಲು ದಸರಾ ಯಶಸ್ಸಿನ ಹಿಂದೆಯೂ ನಿರೂಪಕರ ಪಾತ್ರ ದೊಡ್ಡದಿತ್ತು. ಸಂಜೆಯಾದ ಕೂಡಲೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಮೈದಾನದತ್ತ ಜನರು ಹೆಜ್ಜೆ ಹಾಕುತಿದ್ದರು. ಅಲ್ಲಿ ನಡೆಯುವ ನಾಟಕ ಹಾಸ್ಯ ಸಂಗೀತ ನೃತ್ಯ ಮ್ಯಾಜಿಕ್‌ಗಳನ್ನು ಮಧ್ಯರಾತ್ರಿಯವರೆಗೂ ನೋಡಿ ಆನಂದಿಸಿ ಮನೆಯತ್ತ ಮರಳುತ್ತಿದ್ದರು. ಈ ಎಲ್ಲ ಕಾರ್ಯಕ್ರಮಗಳಿಗೂ ಶಿಖರಪ್ರಾಯದಂತೆ ನಿರೂಪಣೆ ಮಾಡಿದವರು ಮನೆಯಪಂಡ ಶೀಲಾ ಬೋಪಣ್ಣ ಚಂದನಾ ಮಂಜುನಾಥ್ ನಳಿನಿ ಎಂ.ಆರ್.ಅಕ್ರಂ ವಾಮನ ಸೇರಿದಂತೆ ಇತರರು. ಇವರೆಲ್ಲ ತಮ್ಮ ವಿಶಿಷ್ಟ ವಾಗ್‌ಚಾತುರ್ಯದಿಂದ ಪ್ರೇಕ್ಷಕರ ಗಮನ ಸೆಳೆದಿದ್ದು ಮಾತ್ರವಲ್ಲ ಅವರು ಇನ್ನಷ್ಟು ಹೊತ್ತು ಕಾರ್ಯಕ್ರಮ ನೋಡುವಂತೆ ಮಾಡುವಲ್ಲಿ ಯಶಸ್ವಿಯಾದರು. ಕಾರ್ಯಕ್ರಮಗಳು ದಿಢೀರನೆ ಬದಲಾವಣೆಯಾದರೂ ಸಮಯದಲ್ಲಿ ಅಗಾಧವಾದ ವ್ಯತ್ಯಾಸಗಳಾದರೂ ಕಾರ್ಯಕ್ರಮ ಮುಗಿಯುವುದು ತುಂಬಾ ತಡವಾದರೂ ಎಲ್ಲಿಯೂ ಎಡವದೇ ಯಶಸ್ವಿಯಾಗಿ ತೆರೆಮರೆಯಲ್ಲೇ ನಿರೂಪಣೆ ಮಾಡಿ ಜನ ಮೆಚ್ಚುಗೆ ಗಳಿಸಿದರು. ಇವರೊಂದಿಗೆ ಹೊಸಬರಿಗೂ ನಿರೂಪಣೆಗೆ ಅವಕಾಶ ಮಾಡಿಕೊಡಬೇಕಿತ್ತು ಎಂಬ ಅಭಿಪ್ರಾಯವೂ ಸಾರ್ವಜನಿಕ ವಲಯದಿಂದ ಕೇಳಿ ಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.