ADVERTISEMENT

ಕಾಫಿ ತೋಟದಲ್ಲಿ ತಂಗಿದ್ದ ಕಾಡಾನೆ: ಮರಳಿ ಅರಣ್ಯದತ್ತ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 13:22 IST
Last Updated 8 ಜೂನ್ 2021, 13:22 IST
ಗೋಣಿಕೊಪ್ಪಲು ಪೊನ್ನಂಪೇಟೆ ಹೆದ್ದಾರಿಯಲ್ಲಿ ಮಂಗಳವಾರ ಮಧ್ಯಾಹ್ನ ಕಂಡು ಬಂದ ಕಾಡಾನೆ ಹಿಂಡು
ಗೋಣಿಕೊಪ್ಪಲು ಪೊನ್ನಂಪೇಟೆ ಹೆದ್ದಾರಿಯಲ್ಲಿ ಮಂಗಳವಾರ ಮಧ್ಯಾಹ್ನ ಕಂಡು ಬಂದ ಕಾಡಾನೆ ಹಿಂಡು   

ಗೋಣಿಕೊಪ್ಪಲು: ಅರಣ್ಯ ಬಿಟ್ಟು ಕಾಫಿ ತೋಟದಲ್ಲಿ ತಂಗಿದ್ದ 10 ಕಾಡಾನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ, ಮಂಗಳವಾರ ಮರಳಿ ಕಾಡಿಗಟ್ಟಿದರು.

ಪೊನ್ನಂಪೇಟೆ ಸಮೀಪದ ಕುಂದ, ಕೈಕೇರಿ ಭಾಗದ ಕಾಫಿ ತೋಟದಲ್ಲಿ ತಂಗಿದ್ದ ಕಾಡಾನೆಗಳ ಹಿಂಡನ್ನು ಪೊನ್ನಂಪೇಟೆ ವಲಯ ಅರಣ್ಯ ಸಿಬ್ಬಂದಿಗಳು ಆರ್‌ಎಫ್‌ಒ ರಾಜಪ್ಪ ಅವರ ನೇತೃತ್ವದಲ್ಲಿ ಪಟಾಕಿ ಸಿಡಿಸಿ, ಬೆದರು ಗುಂಡು ಹೊಡೆದು ನಾಗರಹೊಳೆ ಅರಣ್ಯದಂತ ಅಟ್ಟಿದರು.

ಗೋಣಿಕೊಪ್ಪಲಿನ ಅರುವತ್ತೊಕ್ಕಲು ಕಾಫಿ ತೋಟದಿಂದ ನುಗ್ಗಿದ ಆನೆಗಳು, ಗೋಣಿಕೊಪ್ಪಲು ಪೊನ್ನಂಪೇಟೆ ಹೆದ್ದಾರಿಯ ರುದ್ರಭೂಮಿ ಬಳಿ ರಸ್ತೆ ದಾಟಿ ಚೆನ್ನಂಗೊಲ್ಲಿ, ಮಾಯಮುಡಿಯತ್ತ ಸಾಗಿದವು. ಅಲ್ಲಿಂದ ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್ ಹುನುಗುಂದ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಕ್ಷಿಪ್ರ ಕಾರ್ಯಾಚರಣೆ ತಂಡ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆಗಳನ್ನು ನಾಗರಹೊಳೆ ಅರಣ್ಯಕ್ಕೆ ಅಟ್ಟಿದರು. ತಿತಿಮತಿ ಎಸಿಎಫ್ ಉತ್ತಪ್ಪ ಕಾರ್ಯಾಚರಣೆ ತಂಡದ ಮಾರ್ಗದರ್ಶಕರಾಗಿದ್ದರು.

ADVERTISEMENT

ಲಾಕ್‌ಡೌನ್ ಆದಾಗಿನಿಂದ ರಸ್ತೆಗಳಲ್ಲಿ ಜನರ ಮತ್ತು ವಾಹನಗಳ ಓಡಾಟ ಕಡಿಮೆ ಇರುವುದರಿಂದ ಕಾಡಾನೆಗಳು ಕಾಫಿ ತೋಟವನ್ನು ಆಕ್ರಮಿಸಿಕೊಂಡು, ಎಲ್ಲೆಂದರಲ್ಲಿ ಮನ ಬಂದಂತೆ ಸುಳಿದಾಡುತ್ತಿವೆ. ಕೊಡಗಿನ ಯಾವ ರಸ್ತೆಯಲ್ಲಿ ಓಡಾಡಿದರೂ ಆನೆಗಳ ಹಿಂಡೇ ಕಂಡು ಬರುತ್ತಿದೆ. ಜತೆಗೆ, ಜನರ ಪ್ರಾಣಕ್ಕೂ ಅಪಾಯ ಉಂಟಾಗುತ್ತಿದೆ. ಹೀಗೆ, ಸುಳಿದಾಡುತ್ತಿರುವ ಆನೆಗಳಿಂದಲೇ ಸೋಮವಾರ ಪೊನ್ನಂಪೇಟೆ ಮುಖ್ಯರಸ್ತೆ ಪಕ್ಕದಲ್ಲಿರುವ ಪಿಎಚ್ಎಸ್ ಕಾಲೊನಿಯ ರಂಗಸ್ವಾಮಿ ಎಂಬುವವರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.