
ಕೃಷ್ಣ ಬೈರೇಗೌಡ
ಕುಶಾಲನಗರ (ಕೊಡಗು ಜಿಲ್ಲೆ): ‘ಪ್ರಜಾಸೌಧ’ ನಿರ್ಮಾಣಕ್ಕಾಗಿ ಭೂಮಿಪೂಜೆ ಮಾಡಲು ಮಂಗಳವಾರ ಇಲ್ಲಿಗೆ ಭೇಟಿ ನೀಡಿದ್ದ ಕಂದಾಯ ಖಾತೆ ಸಚಿವ ಕೃಷ್ಣ ಬೈರೇಗೌಡ ವಿರುದ್ಧ ರೈತರು ಅಸಮಾಧಾನ ಹೊರ ಹಾಕಿದರು.
‘ಜಮೀನಿನ ಪೋಡಿ ದುರಸ್ತಿಗಾಗಿ ಹತ್ತಾರು ವರ್ಷಗಳಿಂದ ಅರ್ಜಿ ಸಲ್ಲಿಸಿದ್ದರೂ ಹಾಗಿಲ್ಲ. ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ’ ಎಂದು ಆರೋಪಿಸಿದರು.
ಪ್ರತಿಕ್ರಿಯಿಸಿದ ಸಚಿವರು, ‘ಕಾನೂನು ರೀತಿಯಲ್ಲಿ ದಾಖಲೆಗಳು ಸರಿ ಇದ್ದರೆ ಮಾತ್ರ ಬೇಗ ದಾಖಲೆ ಸರಿಪಡಿಸಿಕೋಡುತ್ತೇವೆ’ ಎಂದು ಹೇಳಿ ಹೊರಟರು.
ಇದರಿಂದ ಅಸಮಾಧಾನಗೊಂಡ ರೈತರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಂದಾಯ ಇಲಾಖೆಯಲ್ಲಿರುವ ಭ್ರಷ್ಟಾಚಾರದ ವಿರುದ್ಧ, ನಾವು ಸೋಮವಾರ ವಿಷದ ಬಾಟಲಿಯ ಜೊತೆ ಪ್ರತಿಭಟಿಸಿದರೂ ಸಚಿವರಿಗೆ ಕನಿಷ್ಠ ಸೌಜನ್ಯವೂ ಇಲ್ಲ. ಇನ್ನು ವಿಷ ಕುಡಿಯದೇ ಬೇರೆ ದಾರಿ ಇಲ್ಲ’ ಎಂದರು.
ಇದಕ್ಕೂ ಮುನ್ನ ಸಚಿವರು ಕಾರು ಹತ್ತುವಾಗ, ಅವರ ಬೆಂಬಲಿಗರು ಸಭಿಕರ ಸಾಲಿನಲ್ಲಿ ಕುಳಿತಿದ್ದ ರೈತರನ್ನು ಮನವಿ ಕೊಡುವಂತೆ ಕರೆದರು. ಆದರೆ, ರೈತರು ಒಪ್ಪದೇ ಸಚಿವರೇ ತಮ್ಮ ಬಳಿ ಬರಬೇಕೆಂದು ಹಠ ಹಿಡಿದರು. ನಂತರ, ಸಚಿವರು ರೈತರ ಬಳಿಗೆ ತೆರಳಿ ಮನವಿ ಸ್ವೀಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.