ADVERTISEMENT

ಜೀವನ ಕ್ರಮ ಕಲಿಸುವ ಜಾನಪದ: ಡಾ.ಮೈಸೂರು ಉಮೇಶ್

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2025, 6:59 IST
Last Updated 13 ಮಾರ್ಚ್ 2025, 6:59 IST
ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಜನಪದ ಉತ್ಸವವನ್ನು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಉದ್ಘಾಟಿಸಿದರು
ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಜನಪದ ಉತ್ಸವವನ್ನು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಉದ್ಘಾಟಿಸಿದರು   

ಕುಶಾಲನಗರ: ‘ನಮ್ಮ ನಾಡಿನ ಸಂಸ್ಕೃತಿ, ಸಂಪ್ರದಾಯಗಳನ್ನು ಒಳಗೊಂಡಿರುವ ಜಾನಪದ ಸಂಗೀತ, ಕಲೆ ನಮಗೆ ಜೀವನ ಕ್ರಮಗಳನ್ನು ಕಲಿಸುತ್ತದೆ ಎಂದು ಕರ್ನಾಟಕ ಜನಪದ ಅಕಾಡೆಮಿ ಸದ್ಯ ಮೈಸೂರು ಉಮೇಶ್ ಹೇಳಿದರು.

ಇಲ್ಲಿನ ಹಾರಂಗಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ವೇದಿಕೆ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಕ್ರೀಡಾ ವಿಭಾಗದಿಂದ ಬುಧವಾರ ಆಯೋಜಿಸಿದ್ದ ಜನಪದ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿವಿಧ ಸಂಸ್ಕೃತಿ, ಸಂಪ್ರದಾಯಗಳನ್ನು ಒಳಗೊಂಡಿರುವ ಜಾನಪದಕ್ಕೆ ಸಾವಿಲ್ಲ. ಈ ದಿಸೆಯಲ್ಲಿ ಯುವ ಜನಾಂಗ ಯಾಂತ್ರಿಕ ಜೀವನ ಶೈಲಿಯನ್ನು ಬದಿಗಿಟ್ಟು, ಜಾನಪದ ಶೈಲಿಯ ಬದುಕನ್ನು ‌ಕಟ್ಟಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಜಾನಪದಕ್ಕೆ ಅದ್ಭುತವಾದ ಶಕ್ತಿಯಿದೆ. ನಮ್ಮ ಪೂರ್ವಜರು, ಹಿರಿಯರು ಕಟ್ಟಿದ, ಸೃಷ್ಟಿಸಿದ ಮೂಲ ಜಾನಪದ ಸಾಹಿತ್ಯವನ್ನು ನಮ್ಮ ಮನೋಧರ್ಮಕ್ಕೆ ಅನುಗುಣವಾಗಿ ಅಥವಾ ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಬಹುದ ಎಂಬ ಪ್ರಶ್ನೆ ಮೂಡಿದೆ. ಆದರೆ ತಂತ್ರಜ್ಞಾನ ಸ್ನೇಹಿ ಶಿಕ್ಷಣಕ್ಕೆ ನಾವು ತೆರೆದುಕೊಂಡಿರುವ ಹಿನ್ನೆಲೆಯಲ್ಲಿ ನಮ್ಮ ಜಾನಪದವನ್ನು ‌ಮರೆಯುತ್ತಿದ್ದೇವೆ. ಆದ್ದರಿಂದ ವಿದ್ಯಾರ್ಥಿಗಳು ನಮ್ಮ ಪೂರ್ವಜರು ಸೃಷ್ಟಿಸಿದ ಜಾನಪದವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

‘ವಿದ್ಯಾರ್ಥಿಗಳು ಕೊಡಗಿನ ಸಂಸ್ಕೃತಿ, ಸಾಹಿತ್ಯವನ್ನು ಅರ್ಥಮಾಡಿಕೊಳ್ಳಬೇಕು. ಕೊಡಗು ವೀರ ಪರಂಪರೆ ಸಂಸ್ಕೃತಿಯ ಜೊತೆಗೆ ನೈಸರ್ಗಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತಿಕೆಯನ್ನು ಹೊಂದಿರುವ ಜಿಲ್ಲೆಯಾಗಿದ್ದು,ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನೀವುಗಳೇ ಧನ್ಯರು’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ‘ಎಲ್ಲ ಕಲೆಗಳಿಗೂ ಜನಪದ‌ ಮೂಲವಾಗಿದ್ದು,ಎಲ್ಲ ಕಲೆಗಳಿಗೂ ಜಾನಪದ ಸಹಕಾರಿ’ ಎಂದು ಹೇಳಿದರು.

‘ನಮ್ಮ ದೇಶದಲ್ಲಿ ಆಸ್ತಿತ್ವದಲ್ಲಿರುವ ಜಾನಪದದ ವಿವಿಧ ಪ್ರಕಾರಗಳು ಜಗತ್ತಿನ ಯಾವುದೇ ದೇಶದಲ್ಲಿ ಕಾಣಸಿಗುವುದಿಲ್ಲ. ಜಾನಪದ ಕಲೆ ಜಾಗತೀಕರಣವಾಗಿದ್ದು, ಮಾನವೀಯ ಮೌಲ್ಯಗಳನ್ನು ಒತ್ತಿ ಹೇಳುತ್ತವೆ’ ಎಂದರು.

ಕಾಲೇಜಿನ‌ ಪ್ರಭಾರ ಪ್ರಾಂಶುಪಾಲ ಡಾ. ಪುಟ್ಟರಾಜು ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ರಾಜೇಗೌಡ, ಶಶಿಕಿರಣ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ‌ ಇತಿಹಾಸ ಉಪನ್ಯಾಸಕಿ ಶಾಂತಿ, ಪೊನ್ನಂಪೇಟೆ ಜಾನಪದ ಕಲಾವಿದ ಗಿರೀಶ್, ಐ.ಕ್ಯೂ.ಎ.ಸಿ. ಸಮಿತಿ ಸಂಚಾಲಕ ಪುಟ್ಟರಾಜು, ಸಾಂಸ್ಕೃತಿಕ ಸಮಿತಿ ಸಂಚಾಲಕ ಟಿ.ಸುಧಾಕರ್, ರೆಡ್‌ಕ್ರಾಸ್ ಸಮಿತಿ ಸಂಚಾಲಕ ಪಿ.ರಮೇಶ್‌ಚಂದ್ರ,ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಡಾ.ಬಿ.ಕೆ. ಕುಮಾರ್ ಪಾಲ್ಗೊಂಡಿದ್ದರು.

ಜಾನಪದ ಉತ್ಸವ ಅಂಗವಾಗಿ ಪುರುಷ ಉಪನ್ಯಾಸಕರು, ವಿದ್ಯಾರ್ಥಿಗಳು ಶರ್ಟ್ ಮತ್ತು ಪಂಚೆ ಹಾಗೂ ಮಹಿಳಾ ಉಪನ್ಯಾಸಕರು, ವಿದ್ಯಾರ್ಥಿನಿಯರು ಸೀರೆ ಉಟ್ಟು ಎಲ್ಲರ ಗಮನ ಸೆಳೆದರು.

ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಜನಪದ ಉತ್ಸವ ಕಾರ್ಯಕ್ರಮವನ್ನು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.