ಗೋಣಿಕೊಪ್ಪಲು: ದಸರಾ ಜನೊತ್ಸವಕ್ಕೆ ಇಲ್ಲಿನ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಮೈದಾನ ಸಜ್ಜುಗೊಂಡಿದೆ. ಸೆ.22ರಿಂದ ಅ.2ರವರೆಗೆ ನಡೆಯಲಿರುವ ಉತ್ಸವದಲ್ಲಿ 50ಕ್ಕೂ ಹೆಚ್ಚು ಕಲಾವಿದರು ನೃತ್ಯ ಮಾಡಬಲ್ಲ ವಿಶಾಲ ವೇದಿಕೆ ನಿರ್ಮಾಣಗೊಂಡಿದೆ. ಎಲ್ಇಡಿ ಪರದೆಯನ್ನೂ ಅಳವಡಿಸಲಾಗಿದೆ.
2 ಸಾವಿರ ಪ್ರೇಕ್ಷಕರು ಕುಳಿತುಕೊಳ್ಳಬಹುದಾದ ಆಸನ ವ್ಯವಸ್ಥೆ ಮಾಡಲಾಗಿದೆ. ಮೇಲ್ಚಾವಣಿಗೆ ಜರ್ಮನ್ ಮಾದರಿಯ ಟಾರ್ಪಾಲ್ ಬಳಸಲಾಗಿದೆ. ಮೈದಾನಕ್ಕೆ ತೆರಳುವ ಕೃಷಿ ವಿಜ್ಞಾನ ಕೇಂದ್ರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುವಿನ ರಸ್ತೆಯನ್ನು ಸ್ವಚ್ಛಗೊಳಿಸಿ ಎರಡು ಬದಿಯಲ್ಲಿ ವರ್ಣರಂಜಿತ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಮೈಸೂರು ರಸ್ತೆಯ ಸೀಗೆತೋಡುವಿನಿಂದ ವಿರಾಜಪೇಟೆ ರಸ್ತೆಯ ಕೈಕೇರಿವರೆಗೂ ಹೆದ್ದಾರಿ ಬದಿಯಲ್ಲಿ ತ್ರಿವರ್ಣದ ಸಾಲು ದೀಪ ಅಲಂಕಾರ ಮಾಡಲಾಗಿದೆ.
ಮೈದಾನದಲ್ಲಿ ಒಂದು ಕಡೆ ತಿಂಡಿತಿನಿಸುಗಳ ವ್ಯಾಪಾರಸ್ಥರಿಗೆ, ಸಮಿತಿ ಮತ್ತು ಕಲಾವಿದರ ಊಟೋಪಚಾರಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮತ್ತೊಂದು ಬದಿಯಲ್ಲಿ ಶೌಚಾಲಯ ವ್ಯವಸ್ಥೆ ಹಾಗೂ ಪ್ರವೇಶದ್ವಾರದ ಬಳಿ ವಾಹನ ನಿಲುಗಡೆ ಮೊದಲಾದ ವ್ಯವಸ್ಥೆ ಮಾಡಲಾಗಿದೆ.
ಮೈಸೂರು ರಸ್ತೆಯ ಸೀಗೆತೋಡುವಿನಿಂದ ವಿರಾಜಪೇಟೆ ರಸ್ತೆಯ ಕೈಕೇರಿವರೆಗೂ ಹೆದ್ದಾರಿ ಬದಿಯಲ್ಲಿ ತ್ರಿವರ್ಣದ ಸಾಲು ದೀಪ ಅಲಂಕಾರ ಮಾಡಲಾಗಿದೆ. ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮ ಜರುಗುವ ವೇದಿಕೆಗೆ ಎಲ್ಇಡಿ ಪರದೆ ಅಳವಡಿಸಲಾಗಿದೆ.
11 ದಿನಗಳ ಕಾಲ ನಡೆಯುವ ಜನೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಶ್ರಮಿಸಲಾಗಿದೆ. ಇದರ ಜತೆಗೆ ಮಹಿಳಾ ದಸರಾ, ಕವಿಗೋಷ್ಠಿ, ಮಕ್ಕಳ ದಸರಾ, ಯುವ ದಸರಾ ಕೂಡ ಕಳೆ ತುಂಬಲಿವೆ ಎಂದು ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.